ಕಾಂಗ್ರೆಸ್ನವರನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಆರೋಪ: ಶೆಟ್ಟರ್ ಬಾಂಬ್
Team Udayavani, Nov 18, 2021, 2:04 PM IST
ದಾವಣಗೆರೆ: ಕಾಂಗ್ರೆಸ್ನವರನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಅವರು ಬಿಟ್ಕಾಯಿನ್ ವಿಷಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲೇ ಅಂತಃಕಲಹ ಇದೆ ಎನ್ನುವುದಕ್ಕೆ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿನ ಕೆಲವಾರು ಘಟನೆಗಳು ಸಾಕ್ಷಿ. ಸಿದ್ದರಾಮಯ್ಯ ಕಾಂಗ್ರೆಸ್ನವರನ್ನೇ ಗುರಿ ಯಾಗಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ನವರೇ ಪರಸ್ಪರ ಗುರಿಯಾಗಿಟ್ಟುಕೊಂಡು ಬಿಟ್ ಕಾಯಿನ್ ವಿಷಯವಾಗಿ ಆರೋಪ ಮಾಡುತ್ತಿದ್ದಾರೆ. ಬಿಟ್ಕಾಯಿನ್ನಲ್ಲಿ ನಮ್ಮವರು ಯಾರೂ ಸಹ ಇಲ್ಲ ಎಂದರು.
2016ರಲ್ಲಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲೇ ಬಿಟ್ ಕಾಯಿನ್ ಪ್ರಾರಂಭವಾಗಿರುವುದು. ಈಗ ಬಿಟ್ಕಾಯಿನ್ ಬಗ್ಗೆ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ವರೇ ಆಗಲೇ ಸೂಕ್ತ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲ ಎಂದು ಪ್ರಶ್ನಿದದರು.
ಬಿಟ್ಕಾಯಿನ್ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ಆವರ ಬಳಿ ಬಿಟ್ಕಾಯಿನ್ ಬಗ್ಗೆ ಮಾಹಿತಿ ಇದ್ದಲ್ಲಿ ಮಾಹಿತಿ ನೀಡಬಹುದು. ಸತ್ಯಾಂಶವನ್ನ ತಿಳಿಸಬಹುದು. ಬಿಟ್ಕಾಯಿನ್ ವಿಚಾರದಲ್ಲಿ ಸರ್ಕಾರಕ್ಕೆ ಯಾರನ್ನು ರಕ್ಷಣೆ ಮಾಡುವ ವಿಚಾರವೇ ಇಲ್ಲ. ಸರ್ಕಾರಕ್ಕೆ ಅಂತ ಉದ್ದೇಶವೇ ಇಲ್ಲ. ಸರ್ಕಾರಕ್ಕೆ ಬಿಟ್ ಕಾಯಿನ್ ವಿಚಾರವನ್ನ ಬಿಟ್ಟು ಹಾಕುವಂತಹ. ಪ್ರಮೇಯವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ
ವಿಧಾನ ಪರಿಷತ್ತಿನ25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲೆಡೆ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಅಂದ ಮಾತ್ರಕ್ಕೆ 15 ಸ್ಥಾನದಲ್ಲಿ ಮಾತ್ರ ಗೆಲ್ಲುತ್ತೇವೆ ಎಂದಲ್ಲ.15ಕ್ಕೂ ಹೆಚ್ಚು ಎಂದರೆ 25 ಸಹ ಆಗಬಹುದು ಎಂದರು.
ವಿಧಾನ ಪರಿಷತ್ತು ಚುನಾವಣೆಯಲ್ಲಿ ಸ್ಪಽಸಲು ಬಿಜೆಪಿಗೆ ಅಭ್ಯರ್ಥಿಗಳ ಕೊರತೆಯೇ ಇಲ್ಲ. ಕೆಲವಾರು ಕ್ಷೇತ್ರದಲ್ಲಿ 15-20 ಜನರು ಸಲ್ಲಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲಿ 4-5 ಜನರು ಅರ್ಜಿ ಸಲ್ಲಿಸಿದ್ದಾರೆ. ಕೋರ್ ಸಮಿತಿ ಸಭೆಯಲ್ಲಿ ಶೇ90 ರಷ್ಟು ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷರು ಪಟ್ಟಿಯನ್ನ ಹೈಕಮಾಂಡ್ಗೆ ಕಳಿಸಿದ್ದಾರೆ. ಶುಕ್ರವಾರ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಣೆ ಆಗಲಿದೆ. ಕಾಂಗ್ರೆಸ್ನವರೇ ಇನ್ನೂ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಗೆ ಅಭ್ಯರ್ಥಿಗಳ ಕೊರತೆಯೇ ಇಲ್ಲ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಸರ್ಕಾರ ರಚಿಸಿದೆ. ರಾಜ್ಯ ವಿಧಾನ ಪರಿಷತ್ತಿನಲ್ಲಿ ಅತಿ ಹೆಚ್ಚು ಸದಸ್ಯರು ಇದ್ದಾರೆ. ಈಗ ನಡೆಯುತ್ತಿರುವ ಚುನಾವಣೆ ನಂತರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸದಸ್ಯರನ್ನು ಹೊಂದಲಿದೆ ಎಂದು ತಿಳಿಸಿದರು.
ಸಿಂಧಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಜೆಡಿಎಸ್ ಹಿಡಿತದಲ್ಲಿದ್ದ ಕ್ಷೇತ್ರವನ್ನ ಮತ್ತೆ ಗೆದ್ದುಕೊಂಡಿದ್ದೇವೆ. ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಆತಿ ಹೆಚ್ಚಿನ ಮತಗಳು ದೊರೆತಿವೆ. ಯಾವುದೇ ಉಪ ಚುನಾವಣೆ, ಪರಿಷತ್ತಿನ ಚುನಾವಣಾ ಫಲಿತಾಂಶ ಸರ್ಕಾರದ ಬಗ್ಗೆ ಜನಾಭಿಪ್ರಾಯ ಅಲ್ಲ. ಸಾರ್ವತ್ರಿಕ ಚುನಾವಣಾ ಫಲಿತಾಂಶ ಜನಾಭಿಪ್ರಾಯ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.