ಲಸಿಕೆ ಪಡೆಯಲು ಒಪ್ಪದ ಕುಟುಂಬದ 7 ಮಂದಿ: ಮನೆಗೆ ಬಂದು ಮನವೊಲಿಸಿದ ಉಡುಪಿ ಜಿಲ್ಲಾಧಿಕಾರಿ!
Team Udayavani, Nov 21, 2021, 7:05 AM IST
ಕೋಟ: ಬ್ರಹ್ಮಾವರ ತಾಲೂಕು ಸಾೖಬ್ರಕಟ್ಟೆಯ ಕಾಜ್ರಲ್ಲಿ ಕಾಲನಿಯ ಹೆರಿಯ ಪಾಣ ಅವರ ಕುಟುಂಬದ 7 ಮಂದಿ ಸದಸ್ಯರು ಅಪನಂಬಿಕೆಯಿಂದಾಗಿ ಕೋವಿಡ್ ನಿರೋಧಕ ಲಸಿಕೆ ಪಡೆಯಲು ನಿರಾಕರಿಸಿದ್ದು, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಶನಿವಾರ ಅವರ ಮನೆಗೆ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಕೋವಿಡ್ ಲಸಿಕೆಯಿಂದ ಜೀವಕ್ಕೆ ಅಪಾಯವಾಗಲಿದೆ ಎಂದು ಭಯಪಟ್ಟಿದ್ದರು ಹಾಗೂ ಕೋವಿಡ್ನ ಆರಂಭದಲ್ಲಿ ಕುಟುಂಬದ ಸದಸ್ಯನೋರ್ವ ಮೃತಪಟ್ಟಾಗ ಆಡಳಿತ ವ್ಯವಸ್ಥೆ, ಊರಿನವರು ತಾತ್ಸಾರ ಮಾಡಿದ್ದಾರೆ ಎನ್ನುವ ನೋವನ್ನು ಹೊಂದಿದ್ದರು. ಆದ್ದರಿಂದ ಆಶಾ ಕಾರ್ಯಕರ್ತೆಯರು, ವೈದ್ಯೆಯರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಯಾರೇ ಮನವೊಲಿಸಿದರೂ ಲಸಿಕೆ ಪಡೆದಿರಲಿಲ್ಲ. ಶನಿವಾರ ಸಾೖಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ವಿಷಯ ತಿಳಿದು ಕುಟುಂಬವನ್ನು ಭೇಟಿ ಮಾಡಿದರು.
ಮನೆಯವರ ಸಮಸ್ಯೆ ಹಾಗೂ ನೋವುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ನಿಮ್ಮ ನೋವಿನಲ್ಲಿ ಅರ್ಥವಿದೆ. ನಿಮಗೆ ಯಾವುದೇ ಸಮಸ್ಯೆಯಾದರೆ ಜಿಲ್ಲಾಡಳಿತ ರಕ್ಷಣೆ ನೀಡಲಿದೆ. ಕಷ್ಟವನ್ನು ಹಂತ-ಹಂತವಾಗಿ ಪರಿಹರಿಸಲಿದ್ದೇವೆ. ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು. ಒಪ್ಪಿದ ಸೂಚಿಸಿದ ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಲಸಿಕೆ ಪಡೆಯುವುದಾಗಿ ಭರವಸೆ ನೀಡಿದರು.
ಪಡಿತರಕ್ಕೆ ವ್ಯವಸ್ಥೆ
ವ್ಯವಸ್ಥೆಯಿಂದ ನೊಂದಿರುವ ತಾವು ಮೂರು ತಿಂಗಳಿಂದ ಪಡಿತರ ಸಾಮಗ್ರಿ ಪಡೆಯುತ್ತಿಲ್ಲ ಎಂದು ಮನೆಯವರು ಈ ಸಂದರ್ಭ ತಿಳಿಸಿದ್ದು, ತತ್ಕ್ಷಣ ಪಡಿತರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಕೋಟ ಆರ್ಐ ರಾಜು, ಲಕ್ಷ್ಮೀನಾರಾಯಣ ಭಟ್, ವಿ.ಎ. ಶರತ್ ಶೆಟ್ಟಿ, ಗ್ರಾ.ಪಂ. ಸದಸ್ಯ ಪ್ರದೀಪ್ ಬಲ್ಲಾಳ್ ಹಾಗೂ ವೈದ್ಯಾಧಿಕಾರಿ ಡಾ| ಜಯಶೀಲ ಆಚಾರ್, ಆಶಾ/ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.