ಮೊಟ್ಟೆ-ಬಾಳೆಹಣ್ಣು ವಿತರಣೆ ಮುಂದುವರಿಸಲು ಮನವಿ
Team Udayavani, Dec 19, 2021, 4:03 PM IST
ರಾಯಚೂರು: ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಿಸುತ್ತಿದ್ದು, ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶನಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಈ ಕುರಿತು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿ ವಿಜಯಪುರ ಜಿಲ್ಲೆಗಳಲ್ಲಿ1-8ನೇತರಗತಿವಿದ್ಯಾರ್ಥಿಗಳಿಗೆ ಮೊಟ್ಟೆಹಣ್ಣು ನೀಡಲಾಗುತ್ತಿದೆ. ಈ ಭಾಗದ ಮಕ್ಕಳಲ್ಲಿ ಅಪೌಷ್ಟಿಕ, ರಕ್ತಹೀನತೆ ಸಮಸ್ಯೆ ಹೆಚ್ಚಾಗಿದ್ದು, ಮಕ್ಕಳ ಆರೋಗ್ಯ ವೃದ್ಧಿಗೆ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಸಮೀಕ್ಷಾ ವರದಿ ಪ್ರಕಾರ ಬಿಸಿಯೂಟದ ಜತೆ ವಾರದಲ್ಲಿ3 ದಿನ ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತಿದೆ ಎಂದು ವಿವರಿಸಿದರು.
ಸರ್ಕಾರ ಯಾವ ಉದ್ದೇಶಕ್ಕೆ ಯೋಜನೆ ಆರಂಭಿಸಿದೆ ಎನ್ನುವ ತಿಳಿವಳಿಕೆ ಇಲ್ಲದೆ ಕೆಲ ಸ್ವಾಮಿಗಳು ಯೋಜನೆ ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಆಹಾರಕ್ರಮ ಮಕ್ಕಳ ಆಯ್ಕೆಯಾಗಿದೆ. ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಕೆಲವರು ಈ ರೀತಿ ಆಹಾರದ ಹಕ್ಕಿನ ಮೇಲೆ ದಾಳಿ ಮಾಡುವುದು ಸರಿಯಲ್ಲ. ಈ ಯೋಜನೆಯಿಂದ ಮಕ್ಕಳ ಹಾಜರಾತಿ ಕೂಡ ಹೆಚ್ಚಾಗಿದೆ.
ಕೆ.ಜಿ. ವೀರೇಶ, ಎಚ್.ಪದ್ಮಾ, ಡಿ.ಎಸ್. ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ವರಲಕ್ಷ್ಮೀ, ರಂಗನಗೌಡ, ಅಕ್ಕಮಹಾದೇವಿ, ಸುಲೋಚನಾ, ಈಶ್ವರಮ್ಮ ಸೇರಿ ಇತರರಿದ್ದರು.