ದೇಸಿ ಸೊಗಡಿನ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ಪಾಟೀಲ್
Team Udayavani, Jan 3, 2022, 3:48 PM IST
ಮಾನ್ವಿ: ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪದ ಕ್ರೀಡೆಗಳನ್ನು ಜೀವಂತವಾಗಿ ಉಳಿಸಿಕೊಂಡು ಬರಲಾಗಿದ್ದು, ಇಂತಹ ದೇಸಿ ಸೋಗಡಿನ ಅಪ್ಪಟ್ಟ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.
ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಗುಂಡಿನ ಮಾರುತೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಲಾದ ರೇಸ್ ಬಂಡಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎತ್ತುಗಳು ಕೃಷಿ ಕ್ಷೇತ್ರದಿಂದ ಕಣ್ಮರೆಯಾಗಿ ಯಾಂತ್ರಿಕೃತ ಕೃಷಿ ವಿಧಾನವನ್ನು ಹೆಚ್ಚಾಗಿ ರೈತರು ಅಳವಡಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಎತ್ತುಗಳ ಬಂಡಿ ರೇಸ್ನಂತಹ ರೈತರ ಕ್ರೀಡೆಗಳಿಂದ ಎತ್ತುಗಳ ಮಹತ್ವ ತಿಳಿಯುತ್ತದೆ ಎಂದರು.
ಗ್ರಾಮದಲ್ಲಿನ ರಸ್ತೆಗಳಲ್ಲಿ ದೂರ ಕ್ರಮಿಸುವ ಎತ್ತುಗಳ ರೇಸ್ ಬಂಡಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 12 ಜೋಡಿ ಎತ್ತುಗಳು ಭಾಗವಹಿಸಿ ತಮ್ಮ ಸಾಮರ್ಥ್ಯ ತೋರಿದವು. ಗ್ರಾಮದ ಜನರಲ್ಲಿ ಎತ್ತುಗಳ ಓಟವು ರೋಮಾಂಚನ ಉಂಟುಮಾಡಿತು.
ರೇಸ್ ಬಂಡಿ ಸ್ಪರ್ಧೆಯಲ್ಲಿ ನಿಗ ದಿತ ದೂರವನ್ನು ಕೇವಲ 13.18 ನಿ. ಕ್ರಮಿಸುವ ಮೂಲಕ ಮಾಡಗಿರಿಯ ರೈತ ದೊಡ್ಡ ದ್ಯಾವಪ್ಪ ಜಿನ್ನೂರು ಅವರ ಎತ್ತುಗಳು ಪ್ರಥಮ ಬಹುಮಾನ, 13.55 ನಿ. ಕ್ರಮಿಸಿದ ಬೈಲಮರ್ಚಡ್ ಗ್ರಾಮದ ರೈತ ಬೊಮ್ಮನಾಳ ಗಂಗಪ್ಪ ಅವರ ಎತ್ತುಗಳು ದ್ವಿತೀಯ, 14.16 ನಿ. ಕ್ರಮಿಸಿದ ರಾಜಲದಿನ್ನಿ ಗ್ರಾಮದ ರೈತ ಚನ್ನಬಸವ ಅವರ ಎತ್ತುಗಳು ತೃತೀಯ ಬಹುಮಾನ ಪಡೆದವು. ಕಲ್ಲೂರು ಮಠದ ಶಂಭುಲಿಂಗಯ್ಯ ತಾತಾ, ರಾಮಣ್ಣ ಪೂಜಾರಿ, ದೊಡ ದೇವಪ್ಪ ಜಿನ್ನೂರು, ಸೈಯದ್ ಗಪೂರ್, ಖುರ್ಷಿದ್ ಸಾಬ್ ಇದ್ದರು.