ಬಾಲ್ಯ ವಿವಾಹ ತಡೆಯಿರಿ
Team Udayavani, Mar 12, 2022, 5:38 PM IST
ಗುರುಮಠಕಲ್: ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದರ ನಿವಾರಣೆಗೆ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಭೀಮರಾಯ ಹೇಳಿದರು.
ಪಟ್ಟಣದ ಹೈಟೇಕ್ ಬಸ್ ನಿಲ್ದಾಣದ ಒಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಸಲುವಾಗಿ ವಿಡಿಯೋ ಆನ್ ವೀಲ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳು, ಶಿಕ್ಷೆ ಹಾಗೂ ಬಾಲ್ಯವಿವಾಹ ನಡೆಯದಂತೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ. ಅಭಿಯಾನವನ್ನು ಗುರುಮಠಕಲ್ ತಾಲೂಕು ಮತ್ತು 2 ಹೋಬಳಿಗಳಲ್ಲಿ ದಿನಕ್ಕೆ 5 ಕಾರ್ಯಕ್ರಮ ಆಯೋಜಿಸಲಾಗುವುದು. ಅಭಿಯಾನದಲ್ಲಿ ಭಾಗವಹಿಸಿದವರಿಂದ ಬಾಲ್ಯವಿವಾಹ ನಿಷೇಧ ಪ್ರಮಾಣ ವಚನ ಸ್ವೀಕರಿಸಿ ಸಹಿ ಪಡೆಯಲಾಗುವುದು. ಆ ಮೂಲಕ ಬಾಲ್ಯವಿವಾಹ ನಿಷೇಧಿಸಿ ನಮ್ಮ ಭಾಗದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಸೊನ್ನೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.