ಕ್ಯಾನ್ಸರ್ ರೋಗಿಯನ್ನೂ ಬಿಡದ ಖದೀಮರು; ವೈದ್ಯರ ಸೋಗಿನಲ್ಲಿ ವಂಚನೆ
ಒಂದು ಇಂಜಕ್ಷನ್ಗೆ 6 ಸಾವಿರ ರೂ. ಗಳಂತೆ 18 ಸಾವಿರ ರೂ. ಬೇಕಾಗುತ್ತದೆ ಎಂದು ತಿಳಿಸಿದರು.
Team Udayavani, Mar 17, 2022, 11:18 AM IST
ಉಡುಪಿ, ಮಾ. 16: ಆರೋಗ್ಯ ಇಲಾಖೆಯ ವೈದ್ಯರ ಸೋಗಿನಲ್ಲಿ ಬಂದು ಕ್ಯಾನ್ಸರ್ ರೋಗಿಯ ಹಣ ವನ್ನು ಲಪಟಾಯಿಸಿದ ಘಟನೆ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೆಹಳ್ಳಿಯಲ್ಲಿ ನಡೆದಿದೆ.
ನೊಂದಿರುವ ಬಡ ಕುಟುಂಬಕ್ಕೆ 2 ತಿಂಗಳಾದರೂ ನ್ಯಾಯ ದೊರೆತಿಲ್ಲ ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ ಶಾನು ಭಾಗ್ ತಿಳಿಸಿದ್ದಾರೆ. ಬಡ ಕೂಲಿ ಕಾರ್ಮಿಕರಾದ ಸುಬ್ಬಣ್ಣ-ಬೇಬಿ ಕುಲಾಲ್ ದಂಪತಿ ಕುಕ್ಕೆ ಹಳ್ಳಿಯವರು. ಇಬ್ಬರೂ ಅನಕ್ಷರಸ್ಥರು. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದಾಳೆ. 4 ವರ್ಷಗಳ ಹಿಂದೆ ಬೇಬಿ ಅವರು ಸ್ತನ ಕ್ಯಾನ್ಸರ್ ಕಾರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಅಂದಿನಿಂದ ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳು 5ರಂದು ಸುಬ್ಬಣ್ಣ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಬೇಬಿ ಒಬ್ಬರೇ ಇದ್ದರು. ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದಿದ್ದು, ಒಬ್ಟಾತ ಮನೆಯೊಳಗೆ ಆಗಮಿಸಿ ಇನ್ನೊಬ್ಬ ಹತ್ತಿರದಲ್ಲೇ ಬೈಕ್ ನಿಲ್ಲಿಸಿ ಕಾಯುತ್ತಿದ್ದ ಆರೋಗ್ಯ ಇಲಾಖೆಯಿಂದ ಬಂದಿರುವ ವೈದ್ಯ ಎಂದು ಪರಿಚಯಿಸಿಕೊಂಡು “ಕಚೇರಿಗೆ ಬಂದಿರುವ ಮಾಹಿತಿ ಪ್ರಕಾರ ನೀವು ಕ್ಯಾನ್ಸರ್ ಪೀಡಿತರು ಎಂಬ ದಾಖಲೆಗಳಿವೆ. ನಿಮಗೆ ಬಂದಿರುವ
ಕ್ಯಾನ್ಸರ್ ಕಾಯಿಲೆ ಗುಣವಾಗಲು ಮೂರು ಚುಚ್ಚುಮದ್ದು ನೀಡಬೇಕು ಎಂದು ಸೂಚನೆ ಬಂದಿದೆ. ಇದರಿಂದ ನೋವು ಗುಣಮುಖವಾಗಲಿದೆ’ ಎಂದು ಹೇಳಿ ನಂಬಿಸಿದರು.
ಸರಕಾರಿ ಫಾರ್ಮಸಿಯಲ್ಲಿ ಔಷಧ ಸ್ಟಾಕ್ ಮುಗಿದ ಕಾರಣ ಸ್ವಲ್ಪ ತಡವಾಗಲಿದೆ. ಮಂಗಳೂರು ಖಾಸಗಿ ಫಾರ್ಮಸಿಯಲ್ಲಿ ದುಡ್ಡು ಕೊಟ್ಟು ಚುಚ್ಚುಮದ್ದು ಪಡೆಯಿರಿ. ಅಮೇಲೆ ಸರಕಾರ ನಿಮಗೆ ಹಣ ಪಾವತಿ ಮಾಡುತ್ತದೆ ಎಂದು ನಂಬಿಸಿದರು. ಇಂಜಕ್ಷನ್ ಔಷಧವನ್ನು ಫ್ರಿಜ್ನಲ್ಲಿ ಇಡಬೇಕು ಎಂದೂ ಸೂಚಿಸಿದರು.
ಒಂದು ಇಂಜಕ್ಷನ್ಗೆ 6 ಸಾವಿರ ರೂ. ಗಳಂತೆ 18 ಸಾವಿರ ರೂ. ಬೇಕಾಗುತ್ತದೆ ಎಂದು ತಿಳಿಸಿದರು. ಪತ್ನಿಯಿಂದ ದೂರವಾಣಿ ಮೂಲಕ ವಿಷಯ ತಿಳಿದ ಸುಬ್ಬಣ್ಣ ತತ್ಕ್ಷಣ ಆಗಮಿಸಿ ಸಾಲದ ಮೂಲಕ 18 ಸಾವಿರ ರೂ. ಹಣ ಹೊಂದಿಸಿ ನೀಡಿದರು. ಔಷಧವನ್ನು ಇಂದೇ ತರಿಸಿ ಕೊಡುವುದಾಗಿ ಹೇಳಿ ಅಪರಿಚಿತರು ಕಾಲ್ಕಿತ್ತರು. ಕುಟುಂಬ ವೈದ್ಯರ ಬೆಂಬಲ ಬಳಿಕ ಘಟನೆಯ ಬಗ್ಗೆ ಕುಟುಂಬ ವೈದ್ಯೆ ಡಾ| ಸುಮಾ ಶಶಿಕಿರಣ ಶೆಟ್ಟಿ ಅವರಿಗೆ ದಂಪತಿ ತಿಳಿಸಿದ್ದು, ವೈದ್ಯರು ಬೇಬಿ ಅವರಿಂದ ಮೊಬೈಲ್ ನಂಬರ್ ಪಡೆದು ಅಪರಿಚಿತ (ನಕಲಿ) ಇಲಾಖೆ ವೈದ್ಯರಿಗೆ ಕರೆ ಮಾಡಿದರು. ವಿಚಾರಿಸಿದಾಗ ಅಸಂಬದ್ಧ ವಿವರಗಳನ್ನು ನೀಡಿದ್ದು, ಅವರು ವೈದ್ಯರಲ್ಲ ಎಂಬುದು ಖಚಿತವಾಯಿತು.
ಬಳಿಕ ಕರೆ ಕಡಿತ ಮಾಡಿದರು. ಸುಬ್ಬಣ್ಣ ದಂಪತಿ ಡಾ| ಶಶಿಕಿರಣ ಶೆಟ್ಟಿ ಅವರ ಸಹಕಾರದಿಂದ ಪ್ರತಿಷ್ಠಾನವನ್ನು ಸಂಪರ್ಕಿಸಿದರು. ಬಳಿಕ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು. ಆರೋಪಿಗಳ ಪತ್ತೆ ಸಾಧ್ಯ ಖದೀಮರು ರೋಗಿಗಳ ವಿವರಗಳನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿ ದ್ದಾರೆ. ಪ್ರಕರಣ ನಡೆದು ಒಂದು ತಿಂಗಳಾಗಿದ್ದು, ಸಾಕ್ಷ್ಯವಿಲ್ಲ ಎಂದು ಪೊಲೀಸರು ಅಸಹಾಯಕತೆ
ವ್ಯಕ್ತಪಡಿಸಿದ್ದಾರೆ.
ಮೊಬೈಲ್ ನಂಬರ್, ಟವರ್ ಲೊಕೇಶನ್, ಇನ್ನಿತರ ತಾಂತ್ರಿಕ ಮಾರ್ಗಗಳಿಂದ ಸುಳಿವು, ಸಾಕ್ಷ್ಯವಿಲ್ಲದ ಅದೆಷ್ಟೋ ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸರಿಗೆ ಬಡ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಈ ಬಗ್ಗೆ ಎಸ್ಪಿ ಅವರ ಜತೆಗೆ ಚರ್ಚಿಸುವುದಾಗಿ ಡಾ| ಶಾನುಭಾಗ್ ತಿಳಿಸಿದರು.