ಜಿಲ್ಲೆಯಲ್ಲಿ 6,500 ಕೋಟಿ ರೂ. ಅಕ್ರಮ ಮರಳು ದಂಧೆ
Team Udayavani, Mar 20, 2022, 2:53 PM IST
ರಾಯಚೂರು: ನ್ಯಾಶನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್ ಸಂಸ್ಥೆಯೂ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಸುಮಾರು 6,500 ಕೋಟಿ ರೂ. ನಷ್ಟು ಅಕ್ರಮ ಮರಳುಗಾರಿಕೆ ನಡೆಸಲಾಗಿದೆ ಎಂದು ಜನಸಂಗ್ರಾಮ ಪರಿಷತ್ನ ನಾಗಮೋಹನ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷದ ಅವಧಿಯಲ್ಲಿ ನಮ್ಮ ಜನಸಂಗ್ರಾಮ ಪರಿಷತ್ ನಿರಂತರ ಹೋರಾಟ ಮಾಡಿ ಮರಳು ದಂಧೆ ನಿಯಂತ್ರಣಕ್ಕೆ ಶ್ರಮಿಸಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಈ ದಂಧೆ ಇನ್ನೂ ಹೆಚ್ಚಾಗಿದೆ. ಈ ದಂಧೆಯಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ನ ಬಹುತೇಕ ಇಲಾಖೆ ಅಧಿಕಾರಿಗಳು, ಹಾಲಿ, ಮಾಜಿ ಶಾಸಕರು ದುರಾಸೆಯಿಂದ ಈ ಅಕ್ರಮ ಎಸಗುತ್ತಿದ್ದಾರೆ. ಇದುವರೆಗಿನ ಜನಸಂಗ್ರಾಮ ಪರಿಷತ್ನ ಜನತಂತ್ರಾತ್ಮಕ ಹೋರಾಟ ಸದರಿ ಕಾಲಘಟ್ಟದಲ್ಲಿ ಅರ್ಥಹೀನ ಎನಿಸುತ್ತದೆ ಎಂದರು.
ಈ ದಂಧೆಗೆ ಕಡಿವಾಣ ಹಾಕಲು ಹೋರಾಟ ನಡೆಸುತ್ತಿರುವ ಜನಸಂಗ್ರಾಮ ಪರಿಷತ್ನ ಪ್ರಧಾನ ಕಾರ್ಯದರ್ಶಿ ಡಾ| ಮೋಹನ್ ರಾವ್ ಮೇಲೆ ಹಲ್ಲೆಗಳಿಗೂ ಯತ್ನ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆರ್ಟಿಒ ಹಾಗೂ ಪೊಲೀಸ್ ಇಲಾಖೆ ಹಲವು ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ರಚನಾತ್ಮಕ ಹೋರಾಟ ನಡೆಸಲಾಗುವುದು. ಹೋರಾಟಗಾರ ಡಾ| ಮೋಹನರಾವ್ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಪರಿಷತ್ ಮುಖಂಡರಾದ ಭಂಡಾರಿಗೌಡ, ಬಿ.ಗೌಡ ಇತರರು ಗೋಷ್ಠಿಯಲ್ಲಿದ್ದರು.