ಅಸಮರ್ಪಕ ಮರಳು ನೀತಿಯಿಂದ ಜನಸಾಮಾನ್ಯರಿಗೆ ಸಂಕಷ್ಟ: ಖಾದರ್
Team Udayavani, Apr 12, 2022, 6:55 AM IST
ಮಂಗಳೂರು: ಕರಾವಳಿ ಭಾಗದಲ್ಲಿ ಅಸಮರ್ಪಕ ಮರಳುಗಾರಿಕೆ ನೀತಿಯಿಂದ ಜನಸಾಮಾನ್ಯರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಮರಳು ಲಭ್ಯವಾಗದೆ ಸಮಸ್ಯೆ ಸೃಷ್ಟಿಯಾಗಿದ್ದು ಸರಕಾರ ತತ್ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಸಿಆರ್ಝಡ್ನಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಸುಮಾರು 7 ತಿಂಗಳಾಗಿದ್ದು ಮರಳಿನ ಸಮಸ್ಯೆ ತಲೆದೋರಿದೆ. ಸರಕಾರ ಸೂಕ್ತ ಮರಳು ನೀತಿ ಜಾರಿಗೆ ತರಲು ವಿಫಲವಾದ ಕಾರಣ ಅನಧಿಕೃತ ಮರಳುಗಾರಿಕೆಗೆ ಅವಕಾಶವಾಗಿದೆ. ಕರಾವಳಿಯಲ್ಲಿ ಇನ್ನೆರಡು ತಿಂಗಳು ಮಾತ್ರ ಮರಳುಗಾರಿಕೆಗೆ ಅವಕಾಶವಿದ್ದು ಮಳೆಗಾಲದಲ್ಲಿ ಮರಳು ತೆಗೆಯಲು ಸಾಧ್ಯವಾಗುವುದಿಲ್ಲ. ನಾನ್ಸಿಆರ್ಝಡ್ನಲ್ಲೂ 18 ಬ್ಲಾಕ್ಗಳ ಪೈಕಿ ಕೇವಲ 3 ಬ್ಲಾಕ್ಗಳಿಗೆ ಮಾತ್ರ ಟೆಂಡರ್ ಆಗಿದೆ. ಅಸಮರ್ಪಕ ಮರಳು ನೀತಿಯಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿದೆ ಈ ಬಗ್ಗೆ ಸರಕಾರ ಜನರಿಗೆ ವಿವರ ನೀಡಬೇಕಾಗಿದೆ ಎಂದರು.
ಕೋಮುವಾದಿ ಶಕ್ತಿಗಳ ನಿಯಂತ್ರಣದಲ್ಲಿ ವೈಫಲ್ಯ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರದ ಶಾಸಕರು, ಸಚಿವರು ವಿವಾದಗಳ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಶಾಂತಿಯುತ ರಾಜ್ಯ ಎನ್ನುವ ಹೆಸರು ಪಡೆದಿರುವ ಕರ್ನಾಟಕದ ಆಡಳಿತವನ್ನು ಸರಕಾರ ಗೂಂಡಾಗಳ ಕೈಗೆ ನೀಡಿದೆ ಎಂದು ಯು.ಟಿ. ಖಾದರ್ ಆರೋಪಿಸಿದರು.