ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸ್ಥಳೀಯ ಯುವಕರ ತಂಡ!
ಶಾನಾಡಿ: ಜಿಂಕೆ ಮೇಲೆ ಬೀದಿನಾಯಿಗಳ ದಾಳಿ!
Team Udayavani, May 8, 2022, 11:59 AM IST
ತೆಕ್ಕಟ್ಟೆ: ಇಲ್ಲಿನ ಕೆದೂರು ಗ್ರಾ.ಪಂ. ವ್ಯಾಪ್ತಿಯ ಶಾನಾಡಿ ಎಂಬಲ್ಲಿ ಬೀದಿನಾಯಿಗಳ ದಾಳಿಗೆ 4 ವರ್ಷದ ಜಿಂಕೆಯೊಂದು ಒಳಗಾಗಿದ್ದು ರಕ್ಷಣೆಯ ಪ್ರಯತ್ನ ವಿಫಲವಾದ ಘಟನೆ ಮೇ 7ರಂದು ಶಾನಾಡಿ ವಿಶ್ವನಾಥ ಹೆಗ್ಡೆ ಅವರಿಗೆ ಸಂಬಂಧಿಸಿದ ಹಾಡಿಯಲ್ಲಿ ಸಂಭವಿಸಿದೆ.
ಶಾನಾಡಿ ಎಂಬಲ್ಲಿ ಸುಮಾರು 7ಕ್ಕೂ ಅಧಿಕ ನಾಯಿಗಳು ಏಕಾಏಕಿ ಜಿಂಕೆಯೊಂದನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಪ್ರಾಣಭಯದಿಂದ ಜಿಂಕೆ ಸಮೀಪದ ಹಾಡಿಯ ಒಳಗೆ ಪ್ರವೇಶಿಸಿತ್ತು. ಇದೇ ಸಂದರ್ಭದಲ್ಲಿ ಪರಿಸರದ ಸ್ಥಳೀಯ ಯುವಕರಾದ ಕೆದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ, ರಾಘವೇಂದ್ರ ಶಾನಾಡಿ, ಉದಯ ಶಾನಾಡಿ, ಸಂತೋಷ್ ಶಾನಾಡಿ, ಸುದರ್ಶನ್ ಕೆದೂರು, ವಿಜಯ ಶಾನಾಡಿ ಅವರು ತತ್ಕ್ಷಣ ಜಿಂಕೆಯ ರಕ್ಷಣೆಗೆ ಧಾವಿಸಿದರು. ಅನಂತರ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆದರಾದರೂ ಕೂಡ ಅಷ್ಟರಲ್ಲಿಯೇ ಜಿಂಕೆ ಅಸುನೀಗಿದೆ.
ಜಿಂಕೆ ಅಸುನೀಗಿದ ಸುದ್ದಿ ಗ್ರಾಮದಲ್ಲಿ ವ್ಯಾಪಿಸುತ್ತಿದ್ದಂತೆ ಸುತ್ತಮುತ್ತಲಿನ ಪರಿಸರದ ಮಕ್ಕಳು ಹಾಗೂ ಹಿರಿಯರು ತಂಡೋಪತಂಡವಾಗಿ ಸ್ಥಳಕ್ಕೆ ಕಾತುರದಿಂದ ವೀಕ್ಷಿಸಿದರು.
ಅರಣ್ಯ ಇಲಾಖೆಯ ಸೋಮಶೇಖರ್ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಶಾನಾಡಿ ವಿಶ್ವನಾಥ ಹೆಗ್ಡೆ, ಹಿರಿಯ ಪ್ರಗತಿಪರ ಕೃಷಿಕ ಶಾನಾಡಿ ರಾಮಚಂದ್ರ ಭಟ್, ಕೆದೂರು ಗ್ರಾ.ಪಂ. ಸದಸ್ಯ ಉಲ್ಲಾಸ್ ಹೆಗ್ಡೆ, ಗ್ರಾ.ಪಂ.ಸಿಬಂದಿ ರಾಮ ದೇವಾಡಿಗ, ಸುಧಾಕರ ಶಾನಾಡಿ ಮತ್ತಿತರರು ಸಹಕರಿಸಿದ್ದರು.