ಉಪವಿಭಾಗ ಭಾಗ್ಯ ಕೈಗೂಡಿಲ್ಲ
ಉಪ್ಪಿನಂಗಡಿ: ಮೆಸ್ಕಾಂ ಕಚೇರಿ
Team Udayavani, May 9, 2022, 9:33 AM IST
ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಅತೀ ದೊಡ್ಡ ವಾಣಿಜ್ಯ ನಗರಿ ಉಪ್ಪಿನಂಗಡಿ. ಆದರೆ ಮೆಸ್ಕಾಂ ಮಾತ್ರ ಇನ್ನೂ ಶಾಖೆಯಾಗಿಯೇ ಉಳಿದುಕೊಂಡಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ದೂರಲಾಗುತ್ತಿದೆ.
ಈಗಾಗಲೇ ಇಲ್ಲಿರುವ ಕಚೇರಿ 10 ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದು, 18 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಒಳ ಗೊಂಡಿದೆ. ನಿಗಮದ ನಿಯಮದಂತೆ 15 ಸಾವಿರಕ್ಕೂ ಅಧಿಕ ಗ್ರಾಹ ಕರನ್ನು ಹೊಂದಿದ್ದರೆ ಅಂತಹ ಶಾಖೆ ಯನ್ನು ಉಪವಿಭಾಗವೆಂದು ಪರಿಗಣಿಸಿ ಮೇಲ್ದರ್ಜೆಗೆ ಏರಿಸಿ ಎಲ್ಲ ಸೌಕರ್ಯಗಳ ಒದಗಿಸಬೇಕಾದದ್ದು ವಾಡಿಕೆ. ಆದರೆ ಇಲ್ಲಿಯ ಶಾಖಾಧಿಕಾರಿಗಳ ಹುದ್ದೆಯನ್ನು ರದ್ದುಗೊಳಿಸಿ ಸಹಾಯಕ ಎಂಜಿನಿಯರ್ ಹುದ್ದೆ ಯನ್ನು ಸೃಷ್ಟಿಸಿ ನಾಲ್ಕು ವರ್ಷ ಕಳೆ ದರೂ ಬೇರೆ ಯಾವುದೇ ಸೌಕರ್ಯ ಒದಗಿಸ ದಿರುವುದು ವಿಪರ್ಯಾಸ.
ಕೌಂಟರ್ ತೆರೆಯಲು ವಿಳಂಬ
ಇಲ್ಲಿ ವಿದ್ಯುತ್ ಬಿಲ್ ಪಾವತಿ ಕೌಂಟರ್ ತೆರೆಯಲು ಹಿಂದೇಟು ಹಾಕುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ನಿಗಮವು ಕಚೇರಿ ಹಿರಿಯ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದೆ ಹೊರತು ಜನಸಾಮಾನ್ಯರಿಗೆ ನೀಡುವ ಸೇವೆ ಯನ್ನು ಮಾತ್ರ ಅಭಿವೃದ್ಧಿ ಪಡಿಸದಿರುವುದಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಸುಸಜ್ಜಿತ ಕಟ್ಟಡ ಇದ್ದು ಬಿಲ್ ಪಾವತಿಸುವ ಕೌಂಟರ್ ಇದ್ದರೂ ಓರ್ವ ಸಿಬಂದಿಯನ್ನು ನೇಮಿಸಲು ಹಿಂದೇಟು ಹಾಕುತ್ತಿದೆ. ಗ್ರಾಹಕರಿಗೆ ಸಂಪರ್ಕ ಕಡಿತವಾದರೆ ಮರು ಸಂಪರ್ಕ ಜೋಡಣೆ ಮಾಡಬೇಕಾದರೆ ಪುತ್ತೂರಿನ ಕೇಂದ್ರ ಕಚೇರಿಯಿಂದ ಸೂಚನೆ ಬರಬೇಕು.
ಪ್ರಗತಿಯಲ್ಲಿದೆ
ಶಾಖೆಯ ವ್ಯಾಪ್ತಿಯಲ್ಲಿ ಈಗಾಗಲೇ 18 ಸಾವಿರಕ್ಕೂ ಅಧಿಕ ಗ್ರಾಹಕರಿದ್ದು ಅಧಿಕಾರಿಗಳ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ ಸಬ್ಸ್ಟೇಶನ್ ನಿವೇಶನ ನಿಗದಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಬಳಿಕ ಪೂರ್ಣ ಪ್ರಮಾಣದ ಉಪ ವಿಭಾಗದ ಎಲ್ಲ ವ್ಯವಸ್ಥೆ ನಡೆಯಲಿದೆ –ರಾಮಚಂದ್ರ, ಎಡಬ್ಲ್ಯುಇ
ಕ್ರಮ ಕೈಗೊಂಡಿಲ್ಲ
ಹೆಚ್ಚಿನ ಸೌಕರ್ಯ ಒದಗಿಸುವುದು ನಿಗಮದ ಕರ್ತವ್ಯ. ಉಪ್ಪಿನಂಗಡಿ ನೆರೆಪೀಡಿತ ಪ್ರದೇಶವೆಂದು ತಿಳಿದಿದ್ದರೂ ಮಳೆಗಾಲದಲ್ಲಿ ಸಿಬಂದಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ನೀಡುವಂತೆ ಒತ್ತಡ ಹೇರಿದರೂ ಕ್ರಮ ಕೈಗೊಂಡಿಲ್ಲ –ಸುರೇಶ ಅತ್ರಮಜಲು, ಉಪ್ಪಿನಂಗಡಿ ,ಗ್ರಾ.ಪಂ. ಸದಸ್ಯ
ಸ್ಪಂದನೆ ಸಿಕ್ಕಿಲ್ಲ
ಮೆಸ್ಕಾಂ ಅಧಿಕಾರಿಗಳ ಹುದ್ದೆ ಭಡ್ತಿಗೊಳಿಸಲಾಗಿದೆ ಹೊರತು ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ನಿಗಮಕ್ಕೆ ಈ ಹಿಂದೆ ಬಿಲ್ ಪಾವತಿ ಸೇವಾ ಕೌಂಟರ್ ತೆರೆಯಲು ಕೇಳಿಕೊಂಡಿದ್ದೆವು. ಆದರೆ ಸ್ಪಂದಿಸಿಲ್ಲ. –ಅಬ್ದುಲ್ ರಹಿಮಾನ್, ಉಪ್ಪಿನಂಗಡಿ ಗ್ರಾ.ಪಂ, ನಿಕಟಪೂರ್ವ ಅಧ್ಯಕ್ಷ
ಇಲ್ಲಗಳ ಪಟ್ಟಿ
ಇಲ್ಲಿಯ ಶಾಖೆ ಗೋಳಿತ್ತೂಟ್ಟು, ವಳಾಲು, ಹಿರೇಬಂಡಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಕೊಯ್ಲ, ರಾಮಕುಂಜ, ಆಲಂತಾಯ, ಬಜತ್ತೂರು, ಕೊಣಾಲು ಗ್ರಾಮ ಗಳನ್ನು ಒಳಗೊಂಡಿದ್ದರೂ ಅಧಿ ಕಾರಿಗಳಿಗೆ ಸಂಚಾರಕ್ಕೆ ವಾಹನ ವ್ಯವಸ್ಥೆ ಇಲ್ಲ. ಸಬ್ಸ್ಟೇಶನ್, ಬಿಲ್ ಕೌಂಟರ್, ಸಿಬಂದಿ ಕೊರತೆ ಎದ್ದು ಕಾಣುತ್ತಿದೆ. ಉಪ್ಪಿನಂಗಡಿಗೆ ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಸಬ್ಸ್ಟೇಶನ್ ನಿಂದ ವಿದ್ಯುತ್ ಒದಗಿಸಿದರೆ, 34 ನೆಕ್ಕಿಲಾಡಿ, ಹಿರೇ ಬಂಡಾಡಿಗೆ ಪುತ್ತೂರು ಮೆಸ್ಕಾಂ ಉಪ ವಿಭಾಗದಿಂದ ಸಂಪರ್ಕ. ಹೀಗೆ ಇದ್ದರೂ ತಾತ್ಕಾಲಿಕ ವ್ಯವಸ್ಥೆಯಡಿ ಉಪ್ಪಿನಂಗಡಿ ಶಾಖೆಯ ದಾಖಲೆಗಳಿಗೆ ಪುತ್ತೂರು ಕಚೇರಿಯನ್ನು ಸಂಪರ್ಕಿಸ ಬೇಕಾಗಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ.
ಎಂ.ಎಸ್.ಭಟ್, ಉಪ್ಪಿನಂಗಡಿ