ಕುಕ್ಕೆ ಸಮೀಪದ ಅರಣ್ಯ ನಡುವಿನ ಹೆದ್ದಾರಿ ಚಿತ್ರ ಹಂಚಿಕೊಂಡ ಆನಂದ್ ಮಹೀಂದ್ರಾ
Team Udayavani, Jun 3, 2022, 7:15 AM IST
ಸುಬ್ರಹ್ಮಣ್ಯ: ಮಹೀಂದ್ರ ಗ್ರೂಪ್ನ ಚೇರ್ರ್ಮೆನ್ ಆಗಿರುವ ಆನಂದ್ ಮಹೀಂದ್ರ ಅವರು ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಸಾಗುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವ್ಯಾಪಕ ವೈರಲ್ ಆಗಿದೆ.
ವಿಸಿಟ್ ಉಡುಪಿ ಎಂಬ ಟ್ವಿಟರ್ ಖಾತೆಯವರು ಕೆಲವು ದಿನಗಳ ಹಿಂದೆ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆ ಸಾಗುವ ಗುಂಡ್ಯ ಬಳಿಯ ಹೆದ್ದಾರಿಯ ಚಿತ್ರವನ್ನು “ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ’ ಎಂಬ ಶೀರ್ಷಿಕೆಯಡಿ ಅಪ್ಲೋಡ್ ಮಾಡಿದ್ದರು. ಹಚ್ಚ ಹಸುರಿನಿಂದ ಇಕ್ಕೆಲಗಳಲ್ಲಿಯೂ ಇರುವ ಮರಗಳು ಹಸುರಿನ ಮೇಲ್ಛಾವಣಿ ನಿರ್ಮಿಸಿದಂತಿರುವ ಮನೋಹರವಾದ ದೃಶ್ಯವನ್ನು ಆನಂದ್ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ. ಸುಂದರವಾಗಿ ಡಾಮರೀಕರಣಗೊಂಡು ಎರಡು ಬದಿಯಲ್ಲಿ ಬಿಳಿ ಬಣ್ಣದ ಗೆರೆಯನ್ನೂ ಹೊಂದಿರುವ ರಸ್ತೆ ಸವಾರರ ಕನಸಿನ ಮಾರ್ಗ ಎಂದು ಕೆಲವರು ಬಣ್ಣಿಸಿದ್ದಾರೆ. ಈ ಟ್ವೀಟ್ಗೆ ಅನೇಕ ಮಂದಿ ಹಲವು ರೀತಿಯಲ್ಲಿ ಹೊಗಳಿ
ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಟ್ವೀಟ್ ಭಾರೀ ವೈರಲ್ ಆಗಿದ್ದು, ಕುಕ್ಕೆಯ ಸುಂದರ ಅರಣ್ಯ ಪ್ರದೇಶವನ್ನು ಜನತೆ ಕೊಂಡಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ಬಯಕೆ ನಮಗಿದೆ ಎಂಬ ರೀತಿಯಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ದೀಪಕ್ ಬೆಂಗಳೂರು ಅವರು ಈ ಚಿತ್ರವನ್ನು ತೆಗೆದಿರುತ್ತಾರೆ.