ಪಠ್ಯ ಪ್ರಮಾದ ಸರಿಪಡಿಸಲು ಸಚಿವ ನಾಗೇಶ್ ಸೂಚನೆ: ಶಾಸಕ ಕುಮಾರಸ್ವಾಮಿ ಸ್ವಾಗತ
ಡಾ. ಅಂಬೇಡ್ಕರ್ ಕುರಿತ "ಸಂವಿಧಾನ ಶಿಲ್ಪಿ " ನಾಮಾಂಕಿತ ಕೈ ಬಿಟ್ಟಿದ್ದ ಪಠ್ಯ ಪರಿಷ್ಕರಣ ಸಮಿತಿ
Team Udayavani, Jun 8, 2022, 5:53 PM IST
ಬೆಂಗಳೂರು:ಡಾ. ಅಂಬೇಡ್ಕರ್ ಕುರಿತ ಪಠ್ಯದ ವಿಚಾರದಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ನಾಗೇಶ್ದೊ ಅವರು ಪ್ರಮಾದವನ್ನು ಸರಿಪಡಿಸಿ ಹೊಸದಾಗಿ ಪಾಠವನ್ನು ಮುದ್ರಿಸುವುದಾಗಿ ಸೂಚನೆ ನೀಡಿರುವುದನ್ನು ಸ್ವಾಗತಿಸುವುದಾಗಿ ಅನುಸೂಚಿತ ಜಾತಿ, ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರೋಹಿತ್ ಚಕ್ರವರ್ತಿ ನೇತೃತ್ವದ 2021-22ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ “ನಮ್ಮ ಸಂವಿಧಾನ” ಪಾಠದಲ್ಲಿ ಸಂವಿಧಾನದ ಆತ್ಮವೇ ಆಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಸಂಬೋದಿಸುವ ನಾಮಾಂಕಿತವನ್ನು ಸಮಿತಿ ಕೈಬಿಟ್ಟಿತ್ತು.
ಈ ಕುರಿತಂತೆ ಪತ್ರ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಏಕೆ ಸಂಬೋದಿಸುತ್ತಾರೆ ಎಂಬುದನ್ನು ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಟಿ.ಟಿ.ಕೃಷ್ಣಾಮಾಚಾರಿಯವರು ಸಂವಿಧಾನ ರಚನಾ ಸಭೆಯಲ್ಲಿ ದಾಖಲು ಮಾಡಿರುವುದನ್ನು ಪಠ್ಯ ಪಾಠದಲ್ಲಿ ರಾಜ್ಯ ಸರ್ಕಾರ ಮುದ್ರಣ ಮಾಡುವುದರ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.