ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆ: ಯುಪಿಯಲ್ಲಿ ಹಿಂಸಾಚಾರ
ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಬಂಧನಕ್ಕಾಗಿ ಹೆಚ್ಚಿದ ಒತ್ತಡ ; ವ್ಯಾಪಕ ಆಕ್ರೋಶ
Team Udayavani, Jun 10, 2022, 5:25 PM IST
ನವದೆಹಲಿ : ಪ್ರವಾದಿ ಮೊಹಮ್ಮದ್ ಅವರ ಕುರಿತಾಗಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಅವರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶುಕ್ರವಾರ ಪ್ರಾರ್ಥನೆಯ ಬಳಿಕ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.
ದೆಹಲಿಯ ಜಾಮಾ ಮಸೀದಿ, ಹೈದರಾಬಾದ್ನ ಮೆಕ್ಕಾ ಮಸೀದಿ, ಲುಧಿಯಾನಾದ ಜಾಮಾ ಮಸೀದಿ, ಕೋಲ್ಕತಾ, ಉತ್ತರಪ್ರದೇಶದ ಪ್ರಯಾಗ್ರಾಜ್ನ ಅಟಾಲಾ ಏರಿಯಾದಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರಯಾಗ್ರಾಜ್ ನಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರತಿಭಟನೆ ವೇಳೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿದ್ದು, ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಎಸಿಎಸ್ ಹೋಮ್ ಅವನೀಶ್ ಅವಸ್ಥಿ, ಹಂಗಾಮಿ ಡಿಜಿಪಿ, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಮುಂತಾದ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದ್ದು, ಕಲ್ಲು ತೂರಾಟ ನಡೆದಿದೆ. ಹಲವಾರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರೀ ಜನಸ್ತೋಮ ನೆರೆದು ಘೋಷಣೆಗಳನ್ನು ಕೂಗಿದೆ. ಕಲ್ಲು ತೂರಾಟವೂ ನಡೆದಿದೆ. ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಲಬುರಗಿಯ ಮುಸ್ಲಿಂ ಚೌಕ್ನಲ್ಲಿ ರಾಝಾ ಅಕಾಡೆಮಿ ಪ್ರತಿಭಟನೆ ನಡೆಸಿತು.ಹೈದರಾಬಾದ್ನ ಮೆಕ್ಕಾ ಮಸೀದಿಯ ಹೊರಗೆ ಪ್ರತಿಭಟನೆಗಳನ್ನು ನಡೆಸಲಾಗಿದೆ.
ಪಂಜಾಬ್ನಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಯಿತು. ಲೂಧಿಯಾನದಲ್ಲಿ ಜಾಮಾ ಮಸೀದಿಯ ಪ್ರತಿಭಟನೆಯ ಕರೆ ನಂತರ, ಪ್ರವಾದಿಯನ್ನು ಅಗೌರವಿಸಿದವರನ್ನು ಬಂಧಿಸುವಂತೆ ಶಾಹಿ ಇಮಾಮ್ ಒತ್ತಾಯಿಸಿದ್ದಾರೆ.