ಇಡಿ, ಸಿಬಿಐ ಬಿಜೆಪಿಗರ ಪ್ರಕರಣಗಳನ್ನು ಪರಿಗಣಿಸುತ್ತಿಲ್ಲ: ಸತೀಶ್ ಜಾರಕಿಹೊಳಿ
ಎಷ್ಟೇ ಹೆದರಿಸಲು ಪ್ರಯತ್ನ ಪಟ್ಟರೂ ನಾವು ಹೆದರುವುದಿಲ್ಲ
Team Udayavani, Jun 16, 2022, 7:24 PM IST
ಬೆಳಗಾವಿ: ಇಡಿ ಮತ್ತು ಸಿಬಿಐನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಪ್ರಕರಣ ಗಳಿದ್ದರೂ ಅವುಗಳನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಆದರೆ ಕಾಂಗ್ರೆಸ್ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ. ಬಿಜೆಪಿಯವರು ಎಷ್ಟೇ ಹೆದರಿಸಲು ಪ್ರಯತ್ನ ಪಟ್ಟರೂ ನಾವು ಅದಕ್ಕೆ ಹೆದರುವುದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದರು.
ರಾಹುಲ್ ಗಾಂಧಿ ಅವರ ಮೇಲೆ ಸಮನ್ಸ್ ನೀಡಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಮೂವರು ಮಂತ್ರಿಗಳ ಮೇಲೆ ದಾಳಿ ನಡೆಯುತ್ತಿದ್ದು, ಇಂತಹ ಪ್ರಕರಣಗಳನ್ನು ಕಾನೂನಿನ ಮೂಲಕವೇ ಹೋರಾಡುವುದು ಸೂಕ್ತ ಎಂದರು.
ಕಾಂಗ್ರೆಸ್ ನಲ್ಲಿ ಯಾವುದೇ ಗುಂಪು ಇಲ್ಲ, ಎಲ್ಲರೂ ಒಂದಾಗಿದ್ದೇವೆ. ಕೆಲವರ ವೈಯಕ್ತಿಕ ವಿಚಾರಗಳು ಬೇರೆಯಾಗಿದ್ದರೂ ಚುನಾವಣೆಯಲ್ಲಿ ಎಲ್ಲರೂ ಒಂದಾಗುತ್ತೇವೆ. ಆದ ಕಾರಣ ವಾಯುವ್ಯ ಶಿಕ್ಷಕರ ಪದವೀಧರರ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಯವರನ್ನು ಗೆಲ್ಲಿಸಲು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ : ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇಲಾಖೆಯಿಂದ ಬಂಪರ್ ಕೊಡುಗೆ
ಪ್ರಕಾಶ ಹುಕ್ಕೇರಿ ಅವರು ಎಸಿಪಿ ವಿರುದ್ಧ ಮಾತನಾಡಿದ್ದು ತಪ್ಪು. ಮುಂದೆ ಈ ರೀತಿ ಆಗದಂತೆ ನೋಡಕೊಳ್ಳಲಾಗುವುದು ಎಂದ ಅವರು, 2023ರ ಚುನಾವಣೆಗಾಗಿ ಈಗಾಗಲೇ ತಯಾರಿ ನಡೆಸಿದ್ದು, ಶಿಕ್ಷಕರ ಮತಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪರ ಅಲೆ ಇದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲ. ಕೆಲ ಸಭೆ, ಸಮಾರಂಭಗಳಲ್ಲಿ ಎಲ್ಲರೂ ಸೇರುವುದು ಅನಿರ್ವಾಯ. ಅದನ್ನೇ ಹೊಂದಾಣಿಕೆ ರಾಜಕಾರಣ ಎನ್ನಲು ಸಾಧ್ಯವಿಲ್ಲ. ಇನ್ನೂ ಪದವೀಧರರ ಮತಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಅವರು ಸುಮಾರು 10 ಸಾವಿರ ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ. ಕೊನೆಗಳಿಗೆಯಲ್ಲಿ ಟಿಕೆಟ್ ನೀಡುವಲ್ಲಿ ಗೊಂದಲ ಉಂಟಾಗಿ ಸೋಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹಣಮನ್ನವರ ಉಪಸ್ಥಿತರಿದ್ದರು.