ಕೆರೆಗಳ ರಕ್ಷಣೆಗಾಗಿ ಸರ್ಕಾರದೊಂದಿಗೆ ಕೈ ಜೋಡಿಸಿ
ಕರ್ನಾಟಕದ ಕೆರೆ ಉಳಿವಿಗೆ 2014ರ ಸಂರಕ್ಷಣಾ ಕಾಯ್ದೆ ಓದಬೇಕು.
Team Udayavani, Jun 20, 2022, 3:46 PM IST
ಆನೇಕಲ್: ಕೆರೆಗಳ ರಕ್ಷಣೆಗೆ ಸರ್ಕಾರದ ಜೊತೆಗೆ ಸ್ಥಳೀಯರು ಕೈ ಜೋಡಿಸಬೇಕು. ನಮ್ಮ ಕೆರೆ, ಕುಂಟೆ, ಕಲ್ಯಾಣಿಗಳ ರಕ್ಷಣೆಗೆ ಪಣತೊಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಹೇಳಿದರು.
ಆನೇಕಲ್ ತಾಪಂ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂ.ಗ್ರಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗ್ರಾ ಜಿಲ್ಲಾಡಳಿತ, ಕೆರೆ ಸಂರಕ್ಷಣಾ , ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲೂಕು ಮಟ್ಟದ ಕೆರೆ ಸಂರಕ್ಷಣೆ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿ, ಕೇವಲ ಕಾರ್ಯಕ್ರಮದ ಭಾಷಣದಲ್ಲಿ ಒಬ್ಬರನ್ನೊಬ್ಬರ ದೂರುವುದು, ಆದೇಶ ಮಾಡುವುದರಿಂದ ಪರಿಸರ ಅಥವಾ ಕೆರೆಗಳ ರಕ್ಷಣೆ
ಸಾಧ್ಯವಿಲ್ಲ. ನಾವು ನಮ್ಮ ಜವಾಬ್ದಾರಿ ಅರಿತು ದಾಖಲೆಗಳ ಮೂಲಕ ಸಮಸ್ಯೆ ಪರಿಹಾರ ಮಾಡಲು ಸಂಬಂಧಪಟ್ಟ ಇಲಾಖೆಗೆ ಪತ್ರದ ಮೂಲಕ ದೂರು ನೀಡಬೇಕು. ಕೆರೆಗಳನ್ನು ಹಾಳು ಮಾಡುತ್ತಿರುವವರು ಹಾಗೂ ಅದರ ರಕ್ಷಣೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯಲು ಕರ್ನಾಟಕದ ಕೆರೆ ಉಳಿವಿಗೆ 2014ರ ಸಂರಕ್ಷಣಾ ಕಾಯ್ದೆ ಓದಬೇಕು. ಅದರಲ್ಲಿ ಇರುವ ಕಾನೂನಿನಡಿಯಲ್ಲಿ ನಾವು ಕೆರೆ ಉಳಿಸಲು ಮುಂದಾಗಬೇಕು ಎಂದರು.
ಪರಿಸರ ಉಳಿವಿಗೆ ಅರಿವು ಅಗತ್ಯ: ನಮ್ಮ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕು ಎನ್ನುವ ಅರಿವು ಇರಬೇಕು. ನಮ್ಮ ಮಕ್ಕಳ ಕೈ ಮಣ್ಣಾಗಬಾರದು ಎನ್ನುವಂತೆ ನಾವಿದ್ದೇವೆ, ನಾವು ನಮ್ಮ ಮಕ್ಕಳಿಗೆ ಪರಿಸರ, ಕೆರೆ, ಕುಂಟೆಗಳ ಉಳಿವಿಗೆ ಅವರಲ್ಲಿ ಜಾಗೃತಿ ಬರುವಂತೆ ಮನಸ್ಸಿಗೆ ತುಂಬಬೇಕು. ನಮ್ಮನ್ನು ಹುಟ್ಟಿಸಿದ ಭಗವಂತನ ಸೇವೆ ಮಾಡಬೇಕು. ನಾವು ಕಾಯಕದಿಂದ ಮಾತ್ರ ಅದನ್ನು ಮಾಡಲು ಸಾಧ್ಯ. ದೇಶಕ್ಕಾಗಿ ಯುವ ಶಕ್ತಿ ಒಂದಾಗಬೇಕು. ಹಿರಿಯರಿಗೆ
ಗೌರವ ಕೊಡಬೇಕು. ಕೆರೆ ರಕ್ಷಣೆ ಆಗಬೇಕಾದರೆ ಯುವಶಕ್ತಿ ಮುಂದೆ ಬರಬೇಕು. ಪರಿಸರ ಉಳಿವಿಗೆ ನಾವು ಹೋರಾಟ ಮಾಡಬೇಕು ಎಂದರು.
ಕೆರೆ ನೀರು ಸಂಪೂರ್ಣ ಮಲೀನ: ವಕೀಲರ ಸಂಘದ ಅಧ್ಯಕ್ಷ ವೈ.ಪ್ರಕಾಶ್ ಮಾತನಾಡಿ, ಆನೇಕಲ್ ತಾಲೂಕಿನ ಹಲವು ಕೆರೆಯಲ್ಲಿ ಕೆಮಿಕಲ್ ನೀರು ತುಂಬಿದ್ದು, ಸಂಪೂರ್ಣ ಮಲೀನವಾಗಿದೆ. ಇದಕ್ಕೆ ಕೆಲವೊಂದು ಕೈಗಾರಿಕೆಗಳ ಕಲುಷಿತ ನೀರು ಹರಿದು ಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಿದರಗುಪ್ಪೆ ಕೆರೆ, ಬಳ್ಳೂರು ಕೆರೆ ಏನಾಗಿದೆ ಎನ್ನುವುದರ ಬಗ್ಗೆ ಎಲ್ಲರಿಗೂ ಅರಿವಿದೆ.
ಆದರೆ, ಕ್ರಮಕ್ಕೆ ಯಾರು ಮುಂದಾಗುತ್ತಿಲ್ಲ. ಮುತ್ತಾ ನಲ್ಲೂರು ಕೆರೆ, ಬೆಳ್ಳಂದೂರು ಕೆರೆಯಂತೆ ಕೆಮಿಕಲ್ ತುಂಬಿ ಹರಿಯುತ್ತದೆ. ಸಂಬಂಧಪಟ್ಟವರು ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದರು. ತಾಪಂ ಇಒ ಲಕ್ಷ್ಮೀನಾರಾಯಣ ಮಾತನಾಡಿ, ಆನೇಕಲ್ ತಾಲೂಕಿನಲ್ಲಿ ನಾವು ಕೆರೆಗಳ ಉಳಿಗಾಗಿ ಸಿಎಸ್ಆರ್ ಯೋಜನೆಯಡಿ ಹಲವೆಡೆ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಆರ್. ಚಂದ್ರಶೇಖರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪಿ.ಎನ್.ಶಾಲಿನಿ, ಭಾರ್ಗವಿ, ಇ.ಎಸ್.ಜಿ ಸಂಸ್ಥೆಯ ಎಂ.ಈಶ್ವರಪ್ಪ, ಲಿಯೋ ಎಫ್ ಸಲ್ಮಾನ ಇದ್ದರು.
ಜಿಗಣಿ ಕೆರೆ ನಿರ್ಲಕ್ಷ್ಯ ಬೇಡ
ಜಿಗಣಿ ಕೆರೆಯನ್ನು ಕಲುಷಿತ ಆದರೂ ಕೂಡ ಸ್ವತ್ಛತೆಗೆ ಮುಂದೆ ಬಂದಿಲ್ಲ. ನಾವು ಭೇಟಿ ನೀಡಿ, ಅದನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸ್ವತ್ಛ ಮಾಡಲು ಒಪ್ಪಿಗೆ ಸೂಚಿಸಿದ್ದರೂ ಕೆಲಸ ಪ್ರಾರಂಭವಾಗಿಲ್ಲ. ನಮ್ಮ ದೇಶದ ಅರಣ್ಯ, ಪರಿಸರ, ಕೆರೆ ರಕ್ಷಣೆ ಆಗದೇ ಹೊರತು ಬದಲಾವಣೆ ಸಾಧ್ಯವಿಲ್ಲ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡಬೇಕು ಎಂದು ಸಂದೀಪ್ ಸಾಲಿಯಾನ್ ಹೇಳಿದರು.