ಭತ್ತ ಖರೀದಿ ಹಣ ನೀಡದೆ ವಂಚನೆ: ರೈತರ ದೂರು
Team Udayavani, Jun 22, 2022, 6:01 PM IST
ಕವಿತಾಳ: ರೈತರಿಂದ ಭತ್ತ ಖರೀದಿಸಿದ ವ್ಯಾಪಾರಿ ಹಣ ನೀಡದೆ ರೈತರಿಗೆ ಕೋಟ್ಯಂತರ ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದ ವ್ಯಾಪಾರಿ ಹಣ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಆತನಿಂದ ಹಣ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಮಸ್ಕಿ ತಾಲೂಕಿನ ಇರೇದಿನ್ನಿ, ಚಿಕ್ಕದಿನ್ನಿ, ಮಲ್ಲದಗುಡ್ಡ, ಸುಂಕನೂರು, ಎಲೆಕೂಡ್ಲಿಗಿ, ಮತ್ತು ಲಿಂಗಸುಗೂರು ತಾಲೂಕಿನ ಕೆಲವು ಹಳ್ಳಿಗಳ ರೈತರಿಂದ ಭತ್ತ ಖರೀದಿಸಿದ ಚಿದಾನಂದ ರೈತರಿಗೆ ಹಣ ನೀಡದೆ ವಂಚಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ರೈತರಾದ ಶರಣಯ್ಯಸ್ವಾಮಿ, ತಿಪ್ಪಾರಡ್ಡಿ, ವೀರನಗೌಡ, ತಿಮ್ಮಣ್ಣ, ವೆಂಕಟೇಶ ಚೆಲುವಾದಿ ಇತರರು ವ್ಯಾಪಾರಿ ವಂಚನೆ ಕುರಿತು ಹೇಳಿದರು. ವೆಂಕಟೇಶ ಚೆಲುವಾದಿ ಮತ್ತು ಅವರ ಮೂವರು ಸಹೋದರರ 16 ಲಕ್ಷ, ಸುಂಕನೂರು ಗ್ರಾಮದ ತಿಪ್ಪಾರಡ್ಡಿ ಅವರ 4 ಲಕ್ಷ, ವೀರನಗೌಡ ಅವರ 9 ಲಕ್ಷ ಸೇರಿದಂತೆ ನೂರಾರು ರೈತರ ಕೋಟ್ಯಂತರ ಹಣ ನೀಡುತ್ತಿಲ್ಲ. ಹೀಗಾಗಿ ಹಣ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡುವುದಾಗಿ ರೈತರು ಹೇಳಿದರು. ಆರೋಪಿ ಕಾಣೆಯಾದ ಬಗ್ಗೆ ಕುಟುಂಬದವರು ದೂರು ದಾಖಲಿಸಿದ್ದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.