ದೇಶಕ್ಕೆ ಕಪ್ಪು ಚುಕ್ಕಿ ತಂದಿಟ್ಟ ಎಮರ್ಜೆನ್ಸಿ: ಜರ್ಮನಿಯ ಮ್ಯೂನಿಚ್ನಲ್ಲಿ ಪ್ರಧಾನಿ ಅಭಿಮತ
Team Udayavani, Jun 27, 2022, 7:20 AM IST
ಮ್ಯೂನಿಚ್: “47 ವರ್ಷಗಳ ಹಿಂದೆ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ತುರ್ತು ಪರಿಸ್ಥಿತಿಯು ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕಿ.
ಜೂ. 26 ನಮಗೆ ಪ್ರಜಾಪ್ರಭುತ್ವವನ್ನು ದಮನ ಮಾಡಲು ಯತ್ನಿಸಿದ ದಿನವನ್ನು ನೆನಪಿಸುತ್ತದೆ’
-ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಜರ್ಮನಿಯ ಮ್ಯೂನಿಚ್ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಭಾರತೀಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಪಡುತ್ತಾರೆ. ಭಾರತ ಪ್ರಜಾಪ್ರಭುತ್ವದ ಮಾತೆ’ ಎಂದರು ಮೋದಿ.
ಅಭಿವೃದ್ಧಿಯಾಗಿದೆ: ಈಗ ಭಾರತದ ಪ್ರತೀ ಹಳ್ಳಿಗೆ ವಿದ್ಯುತ್ ಸಂಪರ್ಕವಿದೆ ಎಂದು ಹೇಳಿದ ಅವರು, ಶೇ. 99ಕ್ಕೂ ಅಧಿಕ ಮನೆಗಳಿಗೆ ಗ್ಯಾಸ್ ಸೌಲಭ್ಯವಿದೆ ಎಂದರು. ಬಡವರಿಗೆ 5 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ. ಪ್ರತೀ 10 ದಿನಕ್ಕೊಂದು ಯುನಿಕಾರ್ನ್ ಸೃಷ್ಟಿಯಾಗುತ್ತಿದೆ.
ತಿಂಗಳಿಗೆ 5,000 ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಕೆಯಾಗುತ್ತಿದೆ, 500 ರೈಲು ಬೋಗಿ ನಿರ್ಮಾಣವಾಗುತ್ತಿದೆ. 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತ ಮುಂದಾಳತ್ವ ಪಡೆದುಕೊಂಡಿದೆ. ಡಿಜಿಟಲ್ ಬ್ಯಾಂಕಿಂಗ್, ಡೇಟಾ ಬಳಕೆ ಸೇರಿ ಎಲ್ಲ ವಿಚಾರದಲ್ಲೂ ಇಂದು ಭಾರತೀಯರು ಮುಂದಿದ್ದಾರೆ. ಭಾರತ ಈ ಹಿಂದೆ ಸ್ಟಾರ್ಟ್ಅಪ್ ಸ್ಪರ್ಧೆಯಲ್ಲೇ ಇರಲಿಲ್ಲ. ಆದರೆ ಈಗ ವಿಶ್ವದ ಮೂರನೇ ಅತೀ ದೊಡ್ಡ ಸ್ಟಾರ್ಟ್ಅಪ್ ಎಕೋ ಸಿಸ್ಟಂ ನಮ್ಮಲ್ಲಿದೆ’ ಎಂದು ಮೋದಿ ಹೇಳಿದ್ದಾರೆ.
ಚಲ್ತಾ ಹೈ ನಿಲುವು ಇಲ್ಲ: ದೇಶದಲ್ಲಿ ಈಗ ಚಲ್ತಾ ಹೈ ನಿಲುವು ಇಲ್ಲ. ಅದರ ಬದಲಾಗಿ ಈಗ ಕೆಲಸ ಪೂರ್ಣವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಾಣ ಉಳಿಸಿದ ದೇಸಿ ಲಸಿಕೆ: ಭಾರತವು ಕೊರೊನಾ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಿ, ರಫ್ತು ಮಾಡಿದೆ. ಇಂದು ದೇಶದ ಶೇ. 90 ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಲಸಿಕೆ ಹಂಚಿಕೆಗೆ ಕನಿಷ್ಠ 10-15 ವರ್ಷ ಬೇಕೆಂದು ವಿರೋಧಿಗಳು ಪ್ರಾರಂಭದಲ್ಲಿ ದೂರಿದ್ದರು. ಆದರೆ ನಾವು ಎರಡೇ ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದ್ದೇವೆ ಎಂದು ಅವರು ಹೇಳಿದರು.
ಅದ್ಧೂರಿ ಸ್ವಾಗತ: ರವಿವಾರ ಬೆಳಗ್ಗೆ ಜರ್ಮನಿಯ ಮ್ಯೂನಿಚ್ಗೆ ಬಂದಿಳಿದ ಮೋದಿಯವರಿಗೆ ಜರ್ಮನಿಯ ಆಡಳಿತ ಮತ್ತು ಅಲ್ಲಿನ ಭಾರತೀಯರು ಅದ್ಧೂರಿ ಸ್ವಾಗತ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯರು “ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಮೋದಿಯನ್ನು ಬರಮಾಡಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಪುಟಾಣಿಗಳೊಂದಿಗೆ ಪ್ರಧಾನಿಯವರು ಕೆಲ ಕಾಲ ಮಾತನಾಡಿದ್ದು, ಆ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ತಂಗುವ ಹೊಟೇಲ್ನಲ್ಲಿ ಎ.ಸಿ. ಇಲ್ಲ
ಜರ್ಮನಿಯಲ್ಲಿರುವ ಪ್ರಧಾನಿ ಮೋದಿಯವರು ರವಿವಾರ ಜರ್ಮನಿಯ ದಕ್ಷಿಣ ಗಡಿ ಭಾಗದಲ್ಲಿರುವ ಪ್ರಸಿದ್ಧ ಸ್ಕೊ$Éàಸ್ ಎಲೌ¾ ಹೊಟೇಲ್ನಲ್ಲಿ ತಂಗಿದ್ದಾರೆ. ವಿಶೇಷವೆಂದರೆ ಈ ಹೊಟೇಲ್ನಲ್ಲಿ ಹವಾನಿಯಂತ್ರಿತ ಕೊಠಡಿಗಳಿಲ್ಲ. ಹಾಗೆಯೇ ಅದ್ಧೂರಿ ಕೊಠಡಿಗಳೂ ಇಲ್ಲ. ಗುಡ್ಡಗಾಡು ಪ್ರದೇಶದಲ್ಲಿರುವ ಹೊಟೇಲ್ಗೆ ಕೂಲರ್ಗಳನ್ನು ಬಳಕೆ ಮಾಡಲಾಗುತ್ತಿದೆ.