ಅದಾಲತ್ನಲ್ಲಿ 7.65 ಲಕ್ಷ ಪ್ರಕರಣ ಇತ್ಯರ್ಥ: ನ್ಯಾ| ವೀರಪ್ಪ
Team Udayavani, Jun 28, 2022, 12:40 AM IST
ಬೆಂಗಳೂರು: ರಾಜ್ಯಾದ್ಯಂತ ಜೂ.25ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನಿರೀಕ್ಷೆಗೂ ಮೀರಿ 7.65 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 508 ಕೋಟಿ ರೂ. ಉಳಿತಾಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.
ರಾಷ್ಟ್ರೀಯ ಲೋಕ ಅದಾಲತ್ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ್ಯಾಯಾಧೀಶರು, ವಕೀಲರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಅಧಿಕಾರ ವರ್ಗದ ಸಹಾಯದಿಂದ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿದೆ ಎಂದರು.
ಹೈಕೋರ್ಟ್ ಪೀಠಗಳಲ್ಲಿ 20 ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ 964 ಬೈಠಕ್ (ಕಲಾಪಗಳನ್ನು) ನಡೆಸಿ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾಗಿದ್ದ ಒಟ್ಟು 10.69 ಲಕ್ಷ ಪ್ರಕರಣಗಳಲ್ಲಿ ಬಾಕಿ ಇರುವ 2.64 ಲಕ್ಷಕ್ಕೂ ಹೆಚ್ಚು ಹಾಗೂ ವ್ಯಾಜ್ಯ ಪೂರ್ವ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಹಿತ 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇಷ್ಟು ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳಬೇಕಿದ್ದರೆ ಸಾವಿರಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಒಂದು ವರ್ಷ ಬೇಕಾಗು ತ್ತಿತ್ತು. ಸಾವಿರಾರು ಕೋಟಿ ರೂ. ಮೊತ್ತವನ್ನು ದಂಡ ರೂಪದಲ್ಲಿ ಸಂಗ್ರಹಿಸಲಾಗಿದೆ, ಪರಿಹಾರ ರೂಪದಲ್ಲಿ ಸಂತ್ರಸ್ತರಿಗೆ ನೀಡಲಾಗಿದೆ ಎಂದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಮತ್ತಿತರರಿದ್ದರು.
ಹೊಸ ಜೀವನ ಆರಂಭಿಸಿದ 107 ದಂಪತಿ
ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಉತ್ತೇಜಿಸಲಾಗಿತ್ತು. ಈ ಬಾರಿ 1,128 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 107ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿ ಪುನಃ ಒಂದಾಗಿ ದ್ದಾರೆ. ಮೈಸೂರಿನಲ್ಲಿ 40, ಬೆಂಗಳೂರಿನಲ್ಲಿ 30 ದಂಪತಿಗಳು ಒಂದಾಗಿದ್ದಾರೆ. ಧಾರವಾಡ ಜಿಲ್ಲೆ ಕಲಘಟಿಯಲ್ಲಿ 50 ವರ್ಷಗಳಿಂದ ಪ್ರತ್ಯೇಕವಾಗಿದ್ದ 85 ವರ್ಷದ ಪತಿ ಹಾಗೂ 80 ವರ್ಷದ ಪತ್ನಿ ಒಂದಾಗಿರುವುದು ವಿಶೇಷವಾಗಿತ್ತು ಎಂದು ನ್ಯಾ| ವೀರಪ್ಪ ತಿಳಿಸಿದ್ದಾರೆ.
ಇತ್ಯರ್ಥಗೊಂಡ ಇತರ ಪ್ರಕರಣಗಳು
– 2.23 ಲಕ್ಷ ಟ್ರಾಫಿಕ್ ಚಲನ್ ಪ್ರಕರಣಗಳನ್ನು ಇತ್ಯರ್ಥ, 22.36 ಕೋಟಿ ರೂ. ದಂಡ ಸಂಗ್ರಹ.
– ಒಟ್ಟು 1.46 ಲಕ್ಷ ಕಂದಾಯ ಪ್ರಕರಣ ಇತ್ಯರ್ಥ.
– 5,585 ಬ್ಯಾಂಕ್ ವಸೂಲಾತಿ ಪ್ರಕರಣ ಇತ್ಯರ್ಥ, 36.24 ಕೋಟಿ ರೂ. ಮೊತ್ತ ವಸೂಲಿ.
– 11,842 ವಿದ್ಯುತ್ ಬಿಲ್ ಪ್ರಕರಣಗಳಲ್ಲಿ 3.10 ಕೋಟಿ ರೂ. ಹಾಗೂ 99,866 ನೀರಿನ ಬಿಲ್ ಪ್ರಕರಣಗಳಲ್ಲಿ 25.04 ಕೋಟಿ ರೂ. ವಸೂಲಿ.
– ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದೆ ಬಾಕಿ ಇದ್ದ 222 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.85 ಕೋಟಿ ರೂ. ಪರಿಹಾರ ನೀಡಲಾಗಿದೆ.
– ಮಾಹಿತಿ ಹಕ್ಕು ಕಾಯ್ದೆಯಡಿ 97 ಪ್ರಕರಣ ಇತ್ಯರ್ಥ.
– ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 194 ಪ್ರಕರಣ ಇತ್ಯರ್ಥ, 6.17 ಕೋಟಿ ರೂ. ಪರಿಹಾರ.
– 4,076 ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ 184 ಕೋಟಿ ರೂ. ಪರಿಹಾರ.
– 226 ವಾಣಿಜ್ಯ ದಾವೆ ಇತ್ಯರ್ಥ, 7.96 ಕೋ. ರೂ. ಪರಿಹಾರ ಪಾವತಿ.
– ಹೈಕೋರ್ಟ್ನಲ್ಲಿದ್ದ ಮೋಟಾರು ವಾಹನ ಕಾಯ್ದೆಯ ಪ್ರಕರಣವೊಂದರಲ್ಲಿ ಅತಿ ಹೆಚ್ಚು, ಅಂದರೆ 1.97 ಕೋಟಿ ರೂ. ಪರಿಹಾರ ನೀಡಲಾಗಿದೆ.
– ಲಘು ವ್ಯಾಜ್ಯಗಳ ನ್ಯಾಯಾಲಯದ ಪ್ರಕರಣವೊಂದರಲ್ಲಿ 2.03 ಕೋಟಿ ರೂ. ಪರಿಹಾರ ದೊರಕಿಸಿಕೊಡಲಾಗಿದೆ.
– ಚೆಕ್ ಬೌನ್ಸ್ ಪ್ರಕರಣವೊಂದು 7.75 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್