ಚಿನ್ನದ ಕರಿಮಣಿ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
Team Udayavani, Jun 29, 2022, 6:40 AM IST
ಬೈಂದೂರು: ಬೈಂದೂರು ತಾಲೂಕಿನ ಯಡ್ತರೆ ಬೈಪಾಸ್ ಬಳಿ ರಿಕ್ಷಾ ಚಲಾಯಿಸಿಕೊಂಡಿರುವ ಅನಿಲ್ ಫೆರ್ನಾಂಡಿಸ್ಅವರು ತಮ್ಮ ರಿಕ್ಷಾದಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಚಿನ್ನದ ಕರಿಮಣಿ ಸರವನ್ನು ಮಹಿಳೆಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮುಂಜಾನೆ ಬೆಂಗಳೂರಿನಿಂದ ಬಂದಿದ್ದ ಯಶೋದಾ ಆಟೋದಲ್ಲಿ ಮನೆಗೆ ಹೋಗುವಾಗ ಕರಿಮಣಿ ಸರ ಬಿದ್ದಿತ್ತು. ಚಾಲಕ ಅನಿಲ್ ಮಹಿಳೆಯನ್ನು ಮನೆಗೆ ಬಿಟ್ಟು ಬಳಿಕ ಯಡ್ತರೆಯ ಆಟೋ ನಿಲ್ದಾಣಕ್ಕೆ ಬಂದು ರಿಕ್ಷಾವನ್ನು ನಿಲ್ಲಿಸಿ ಸ್ವಚ್ಛಗೊಳಿಸುವಾಗ ಸರ ಸಿಕ್ಕಿತು.
ತತ್ಕ್ಷಣ ಬೈಂದೂರು ಠಾಣೆಗೆ ಹಸ್ತಾಂತರಿಸಿದ್ದಾರೆ. ಬಳಿಕ ಚಾಲಕನ ಸಮಕ್ಷಮ 1.50 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಯಶೋದಾ ಅವರಿಗೆ ಹಸ್ತಾಂತರಿಸಲಾಯಿತು.