ಕೊರಟಗೆರೆ : ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಬೋನಿಗೆ
Team Udayavani, Jul 8, 2022, 6:42 PM IST
ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚೀಲಗಾನಹಳ್ಳಿ ಮತ್ತು ಅಕ್ಕಿರಾಂಪುರ ಗ್ರಾಮಗಳ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಕೊರಟಗೆರೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸ್ಥಳೀಯರು ಮತ್ತು ರೈತರು ಕೊರಟಗೆರೆ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳಿಗೆ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಮನವಿ ಮಾಡಿದ್ದರು. ಈ ಹಿಂದೆ ಹಲವು ಬಾರಿ ದಿನಪತ್ರಿಕೆಗಳಲ್ಲಿ ವರದಿಯನ್ನು ಸಹ ಮಾಡಲಾಗಿತ್ತು ತಕ್ಷಣವೇ ಎಚ್ಚೆತ್ತುಕೊಂಡ ಕೊರಟಗೆರೆ ಅರಣ್ಯ ಅಧಿಕಾರಿ ಸುರೇಶ್ ಚಿರತೆಯು ಓಡಾಡುವ ಸ್ಥಳವನ್ನು ಅವರ ಮಾರ್ಗದರ್ಶನದಂತೆ ಅಕ್ಕಿರಾಂಪುರ-ಚೀಲಗಾನಹಳ್ಳಿ ಗ್ರಾಮಗಳ ಹಳ್ಳದ ಪಕ್ಕದಲ್ಲಿ ಬೋನ್ ಇಡಲಾಗಿತ್ತು.
ತಡರಾತ್ರಿ ಆಹಾರವನ್ನು ಹುಡುಕಿಕೊಂಡು ಬಂದಂತಹ ಚಿರತೆಯು ಬೋನಿನೊಳಗೆ ಬಿದ್ದಿರುತ್ತದೆ. ಕೂಡಲೇ ಮಾಹಿತಿಯನ್ನು ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಚಿರತೆಯನ್ನು ರಕ್ಷಿಸಿ, ದೂರದ ದಟ್ಟವಾದ ಅರಣ್ಯ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಎಚ್.ಎಂ.ಸುರೇಶ್, ಉಪವಲಯ ಅರಣ್ಯ ಅಧಿಕಾರಿ ನಾಗರಾಜು, ಅರಣ್ಯ ರಕ್ಷಕ ಬಿ.ಸಿ.ಮಂಜುನಾಥ್,ನರಸಿಂಹಯ್ಯ, ಕಾವಲುಗಾರ ನಾರಾಯಣಪ್ಪ ಹಾಗೂ ಊರಿನ ಗ್ರಾಮಸ್ಥರು ಸಾರ್ವಜನಿಕರು ಸ್ಥಳದಲ್ಲಿದ್ದರು.