ಏನಿದು ಮೆಟ್ರೋ ನಿಲ್ದಾಣದ ಉದ್ಘಾಟನೆ ವಿವಾದ ?: ಮಮತಾಗೆ ಆಹ್ವಾನವಿಲ್ಲವೆ?
ಇದು ಪ್ರಜಾಪ್ರಭುತ್ವದ ಸಂಪ್ರದಾಯವಲ್ಲ ಎಂದ ಟಿಎಂಸಿ
Team Udayavani, Jul 10, 2022, 6:46 PM IST
ಕೋಲ್ಕತಾ : ಪೂರ್ವ-ಪಶ್ಚಿಮ ಕಾರಿಡಾರ್ನ ಸೀಲ್ದಾ ಮೆಟ್ರೋ ನಿಲ್ದಾಣದ ಉದ್ಘಾಟನೆಗೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರೈಲ್ವೆ ಸಚಿವಾಲಯದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ ಎಂದು ಟಿಎಂಸಿ ಹೇಳುವುದರೊಂದಿಗೆ ವಿವಾದ ಭುಗಿಲೆದ್ದಿದೆ. ಆದರೆ, ಕೆಲವೇ ಗಂಟೆಗಳ ನಂತರ, ಮುಖ್ಯಮಂತ್ರಿಯನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ರೈಲ್ವೆ ಮೂಲಗಳು ಸುದ್ದಿ ಸಂಸ್ಥೆಗಳಿಗೆ ಸ್ಪಷ್ಟನೆ ನೀಡಿವೆ.
ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ನ ಪ್ರಮುಖ ನಿಲ್ದಾಣವಾದ ಸೀಲ್ದಾ ಸೋಮವಾರ (ಜುಲೈ 11) ಉದ್ಘಾಟನೆಗೊಳ್ಳಲಿದೆ. ಜುಲೈ 14 ರಿಂದ ಸಾಲ್ಟ್ ಲೇಕ್ ಮತ್ತು ಸೀಲ್ದಾದಲ್ಲಿನ ಸೆಕ್ಟರ್ ೫ ನಡುವೆ ವಾಣಿಜ್ಯ ಸೇವೆಗಳು ಪ್ರಾರಂಭವಾಗಲಿವೆ ಎಂದು ಮೆಟ್ರೋ ರೈಲ್ವೆ ವಕ್ತಾರ ಏಕಲಬ್ಯ ಚಕ್ರವರ್ತಿ ತಿಳಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿಲ್ದಾಣದ ಉದ್ಘಾಟನೆಯನ್ನು ಮಾಡಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸದೆ ಕೇಂದ್ರವು ರಾಜಕೀಯ ಮಾಡುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
ಟಿಎಂಸಿ ಶಾಸಕ ಮದನ್ ಮಿತ್ರಾ ಅವರು ಬ್ಯಾನರ್ಜಿ ಅವರು ರಾಜ್ಯದಲ್ಲಿ ಇಲ್ಲದಿರುವುದರಿಂದ, ಕೆಎಂಆರ್ಸಿ ಪ್ರಮುಖ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ,ಇದು ಪ್ರಜಾಪ್ರಭುತ್ವದ ಸಂಪ್ರದಾಯವಲ್ಲ ಎಂದು ಆರೋಪಿಸಿದ್ದಾರೆ.
ಸಚಿವ ಸುಜಿತ್ ಬಸು ಆಸ್ಪತ್ರೆಗೆ
ಮಮತಾ ಬ್ಯಾನರ್ಜಿ ಅವರ ಸಂಪುಟದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬಸು ಅವರು ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಶನಿವಾರ ತಡರಾತ್ರಿ ಕೋಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸುಜಿತ್ ಅಲ್ಲಿನ ವೈದ್ಯರ ಆರೈಕೆಯಲ್ಲಿದ್ದು, ಎಲ್ಲವೂ ಸುಸೂತ್ರವಾಗಿ ನಡೆದರೆ ಇಂದು, ಭಾನುವಾರ ಅವರನ್ನು ಬಿಡುಗಡೆ ಮಾಡಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶನಿವಾರ ಸಂಜೆಯಿಂದ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ರಾತ್ರಿ ಸಮಸ್ಯೆ ಉಲ್ಬಣಿಸುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.