ಶಾಲಾ-ಕಾಲೇಜು, ಮದರಸಗಳಲ್ಲಿ ಧ್ವಜಾರೋಹಣ ಅಭಿಯಾನಕ್ಕೆ ಸೂಚನೆ
Team Udayavani, Jul 18, 2022, 7:42 PM IST
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳು ಹಾಗೂ ಮದರಸಗಳಲ್ಲಿ ಆ.11ರಿಂದ 17ರ ವರೆಗೆ ರಾಷ್ಟ್ರ ಧ್ವಜಾರೋಹಣ ಅಭಿಯಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದಿದ್ದು ದೇಶದ ಭವ್ಯ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳ ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರ ಅಂಗವಾಗಿ “ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ’ ಕಾರ್ಯಕ್ರಮವನ್ನು ರೂಪಿಸಿದ್ದು, ಯಶಸ್ವಿಗೊಳಿಸಬೇಕು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಮದರಸಗಳಲ್ಲಿ ಧ್ವಜಾರೋಹಣ ಅಭಿಯಾನದ ಜೊತೆಗೆ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ ಸ್ಮರಣೆಯ ಗೀತ ಗಾಯನ, ಕ್ವಿಜ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲು ಸೂಕ್ರ ಕ್ರಮ ಕೈಗೊಳ್ಳಬೇಕು.
ಎಲ್ಲ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವಂತೆ ತಿಳಿಸಲಾಗಿದೆ.