ಕೇಂದ್ರ ಸಚಿವ ಅಮಿತ್ ಶಾ, ಬಿಎಸ್ ವೈ ಭೇಟಿ ವೇಳೆ ಸಿಎಂ ಬೊಮ್ಮಾಯಿ ಬಗ್ಗೆ ಚರ್ಚೆಯಾಗಿದ್ದೇನು?
ಗುಜರಾತ್ ಚುನಾವಣೆ ಜತೆಗೇ ರಾಜ್ಯದಲ್ಲಿ ಚುನಾವಣೆ ಎದುರಿಸಿದರೆ ಹೇಗೆ ? ಎಂಬ ಪ್ರಶ್ನೆಯನ್ನು ಶಾ ಯಡಿಯೂರಪ್ಪ ಮುಂದಿಟ್ಟಿದ್ದರು.
Team Udayavani, Aug 10, 2022, 12:44 PM IST
ಬೆಂಗಳೂರು: ಪಕ್ಷ ಹಾಗೂ ಸರಕಾರದ ಕಾರ್ಯವೈಖರಿ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ ಷರಾ ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಕಂಗೆಡಿಸಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ದಟ್ಡವಾಗಿದೆ ಕೇಳಿ ಬರತೊಡಗಿದೆ.
ಇದನ್ನೂ ಓದಿ:ನಾಲ್ವರ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ಬಳಿಕ ನಿರ್ಧಾರ; ಗೃಹ ಸಚಿವ
ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಡಿಯೂರಪ್ಪ ಅವರನ್ನು ಕರೆಸಿಕೊಂಡು ಪ್ರತ್ಯೇಕ ಚರ್ಚೆ ನಡೆಸಿದ್ದರು. ಆಗ ಸರಕಾರ ಹಾಗೂ ಪಕ್ಷದ ವಿದ್ಯಮಾನಗಳ ಬಗ್ಗೆ ಯಡಿಯೂರಪ್ಪ ನೇರವಾಗಿಯೇ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಗುಜರಾತ್ ಚುನಾವಣೆ ಜತೆಗೇ ರಾಜ್ಯದಲ್ಲಿ ಚುನಾವಣೆ ಎದುರಿಸಿದರೆ ಹೇಗೆ ? ಎಂಬ ಪ್ರಶ್ನೆಯನ್ನು ಶಾ ಯಡಿಯೂರಪ್ಪ ಮುಂದಿಟ್ಟಿದ್ದರು. ಆದರೆ ಇಂಥ ನಡೆ ಖಡಾಖಂಡಿತವಾಗಿ ಬೇಡ. ಮಧ್ಯಂತರ ಚುನಾವಣೆಗೆ ಹೋದರೆ ಸೋಲು ಖಚಿತ ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ ಸರಕಾರದ ನಿಧಾನಗತಿಯ ನಡೆಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ ಎಂದು ವರದಿ ವಿವರಿಸಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಪಕ್ಷದ ಕಾರ್ಯ ವೈಖರಿ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಸಭೆಗಳನ್ನು ಹೊರತುಪಡಿಸಿದರೆ ಚುನಾವಣೆ ಗೆಲ್ಲುವುದಕ್ಕೆ ಬೇಕಾದ ಯಾವ ಚಟುವಟಿಕೆಯೂ ಪಕ್ಷದಲ್ಲಿ ನಡೆಯುತ್ತಿಲ್ಲ ಎಂದು ನೇರ ಆರೋಪ ಮಾಡಿರುವುದು ಬೊಮ್ಮಾಯಿ ಅವರನ್ನು ವಿಚಲಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.