ರಾಷ್ಟ್ರಾಭಿಮಾನ ಹೆಚ್ಚಲು ಪೂರಕ: ಸಚಿವ ಅಂಗಾರ
Team Udayavani, Aug 14, 2022, 9:37 AM IST
ಸುಳ್ಯ : ಜಾಳ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಬೃಹತ್ ಕಾಲ್ನಡಿಗೆಯ ತಿರಂಗಾ ಯಾತ್ರೆ ಶನಿವಾರ ನಡೆಯಿತು.
ಸಚಿವ ಎಸ್. ಅಂಗಾರ ಅವರು ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸರಕಾರ ಪ್ರತೀ ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಅವಕಾಶ ನೀಡಿದೆ. ರಾಷ್ಟ್ರದ ಬಗ್ಗೆ ಅಭಿಮಾನ, ಗೌರವ ಹೆಚ್ಚಾಗಲು ಇದು ಪೂರಕವಾಗಿದೆ. ಸ್ವಾತಂತ್ರ್ಯ ದಿನವನ್ನು ಆಚರಿಸುವ ನಾವು ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರನ್ನು ಸದಾ ಸ್ಮರಿಸಬೇಕಿದೆ ಎಂದರು. ಯುವಕರು, ಹಿರಿಯರೆನ್ನದೆ ಎಲ್ಲರೂ ದೇಶಭಕ್ತಿ ಮೈಗೂಡಿಸಿಕೊಂಡು ದೇಶದ ಸರಕಾರದೊಂದಿಗೆ ಸಹಕರಿಸಿದಾಗ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ ಕಾಮತ್ ಅವರು ರಾಷ್ಟ್ರ ಧ್ವಜವನ್ನು ಅಂಗಾರ ಅವರಿಗೆ ಹಸ್ತಾಂತರಿಸಿದರು.
ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಸಲಹೆಗಾರ ನ. ಸೀತಾರಾಮ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ಯಾಮಪ್ರಸಾದ್ ಅಡ್ಡಂತಡ್ಕ, ಜಾಳ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಕನಕಮಜಲು ಪ್ರಾ.ಕೃ. ಪತ್ತಿನ ಸ. ಸಂಘದ ಅಧ್ಯಕ್ಷ ಡಾ| ಗೋಪಾಲಕೃಷ್ಣ ಭಟ್ ಕಾಟೂರು, ಪ್ರೌ.ಶಾ. ಮುಖ್ಯಶಿಕ್ಷಕ ಗಿರೀಶ್ ಆಚಾರ್ಯ, ಪ್ರಾ. ಶಾಲಾ ಮುಖ್ಯಶಿಕ್ಷಕ ಜಯಪ್ರಸಾದ್ ಕಾರಿಂಜ, ನಿವೃತ್ತ ಮುಖ್ಯಶಿಕ್ಷಕ ಗೋಪಾಲ ರಾವ್, ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ., ಉಪಾಧ್ಯಕ್ಷೆ ಲೀಲಾವತಿ ವಿನೋಬನಗರ, ಸದಸ್ಯರಾದ ಎನ್.ಎಂ. ಸತೀಶ್ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ತಿರುಮಲೇಶ್ವರಿ ಮರಸಂಕ ಉಪಸ್ಥಿತರಿದ್ದರು.