ಶಿವಮೊಗ್ಗ ಗಲಭೆಕೋರರಿಗೆ ಎಸ್ಡಿಪಿಐ ನಂಟು
Team Udayavani, Aug 19, 2022, 9:16 PM IST
ಶಿವಮೊಗ್ಗ: ನಗರದ ಎಎ ಸರ್ಕಲ್ನಲ್ಲಿ ನಡೆದ ಸಾವರ್ಕರ್ ಫೋಟೋ ವಿವಾದ ನಂತರ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಲ್ಕು ಆರೋಪಿಗಳಿಗೆ ಎಸ್ಡಿಪಿಐ ನಂಟು ಇರುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮಾರ್ನಾಮಿಬೈಲಿನ ಮೊಹಮ್ಮದ್ ಜಬೀ (30), ಜೆಸಿ ನಗರದ ನದೀಮ್ (25), ಆರ್ಎಂಎಲ್ ನಗರದ ತನ್ವೀರ್ (22) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಎಸ್ಡಿಪಿಐ ಸಂಘಟನೆಯೊಂದಿಗೆ ಸಕ್ರಿಯ ನಂಟು ಹೊಂದಿದ್ದಾರೆ. ಎಸ್ಡಿಪಿಐ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯವಿರುವ ಫೋಟೋ- ವಿಡಿಯೋಗಳು ಲಭ್ಯವಾಗಿದೆ.
ಸಂಘಟನೆ ಕರೆ ನೀಡುವ ಪ್ರತಿ ಚಟುವಟಿಕೆಯಲ್ಲಿ ಜಬೀ, ನದೀಮ್, ತನ್ವೀರ್ ಹಾಗೂ ರೆಹಮಾನ್ ಭಾಗಿಯಾಗುತ್ತಿದ್ದರು. ಅಲ್ಲದೆ ಸರ್ಕಾರದ ವಿರುದ್ಧ ಪ್ರತಿಭಟನೆ ಜತೆಗೆ ಸಂಘಟನೆ ಕೆಲಸದಲ್ಲಿ ಸಹ ಬಂಧಿತ ಆರೋಪಿಗಳು ಭಾಗಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನೆರೆ ಸಂದರ್ಭದ ಕಾರ್ಯದಲ್ಲೂ ಎಸ್ಡಿಪಿಐ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಆರೋಪಿಗಳು, ಧರ್ಮಕ್ಕೆ ಸಂಬಂಧಿ ಸಿದ ವಿಚಾರದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು ಎನ್ನಲಾಗಿದೆ. ಬಂ ಧಿತ ನಾಲ್ವರು ಆರೋಪಿಗಳನ್ನು ಆ.20ರವರೆಗೆ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ.