ಶೀಘ್ರ 5 ಸಾವಿರ ಪೊಲೀಸರ ನೇಮಕ: ಸಚಿವ ಆರಗ ಜ್ಞಾನೇಂದ್ರ
Team Udayavani, Aug 23, 2022, 10:30 PM IST
ಕೋಲಾರ: ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರ ಅವಶ್ಯಕತೆ ಹೆಚ್ಚಿದ್ದು, ಶೀಘ್ರದಲ್ಲೇ 5 ಸಾವಿರ ಪೊಲೀಸರ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಕೆಜಿಎಫ್ ಪೊಲೀಸ್ ಡಿಎಆರ್ ಆವರಣದಲ್ಲಿ ನಿರ್ಮಿಸಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ, ಶಸ್ತ್ರಾಗಾರ ಮತ್ತು ಶ್ವಾನದಳ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕೆಜಿಎಫ್ ಪೋಲಿಸರಿಗೆ ಬ್ರಿಟಿಷರ ಕಾಲದಿಂದಲೂ ದೊಡ್ಡ ಇತಿಹಾಸ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲದ ಕೋಲಾರ ಜಿಲ್ಲೆಯಲ್ಲಿ 2 ಎಸ್ಪಿ ಕಚೇರಿಗಳಿರುವುದು ವಿಶೇಷ ಎಂದರು.
1902-04 ಅವಧಿ ಯಲ್ಲಿ ಅನೇಕ ಕಟ್ಟಡಗಳು ಈ ತಾಲೂಕಿನಲ್ಲಿ ನಿರ್ಮಾಣವಾಗಿತ್ತು. ಕೆಜಿಎಫ್ ಪೊಲೀಸ್ ಪಡೆಗೆ ಹಿಂದಿನ ಕಾಲದಲ್ಲಿ ಪ್ರತ್ಯೇಕವಾದ ಆಡಳಿತ ಅಧಿಕಾರಿ ಹಾಗೂ ಒಬ್ಬ ಬ್ರಿಟಿಷ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಕೆಜಿಎಫ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ವಿಶೇಷ ಭತ್ಯೆಗಳನ್ನು ನೀಡಲಾಗುತ್ತಿತ್ತು. ಕೆಜಿಎಫ್ ಡಿಎಆರ್ ಘಟಕವು 1956ರಲ್ಲಿ ಪ್ರಾರಂಭಗೊಂಡಿತು. ಡಿಎಆರ್ ಘಟಕಕ್ಕಾಗಿ 2.81 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.