ಹತ್ತು ಬಡ ಕುಟುಂಬಕ್ಕೆ ಸೌರ ಬೆಳಕು ಭಾಗ್ಯ!
ನಮ್ಮನೆ ಹಬ್ಬದಲ್ಲಿ ಘೋಷಿಸಿದ ಯೋಜನೆ ; ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಅಡಿ ಅನುಷ್ಠಾನ
Team Udayavani, Sep 5, 2022, 4:05 PM IST
ಶಿರಸಿ: ಬೆಳಕೇ ಇಲ್ಲದ, ಬೆಳಕಿದ್ದೂ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆಯಲ್ಲಿದ್ದ ಪ್ರತಿಭಾವಂತ ಮಕ್ಕಳಿದ್ದ ಮನೆಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಜತೆಯಾಗಿ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಬೆಳಕಿನ ಭಾಗ್ಯ ಒದಗಿಸಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ ತಾಲೂಕಿನ ಹತ್ತು ಕುಟುಂಬಗಳಿಗೆ ಸೌರ ವಿದ್ಯುತ್ ಕೊಡಲಾಗುತ್ತಿದೆ. ಗಣೇಶ ಹಬ್ಬದ ಮೊದಲೇ ಐದಕ್ಕೂ ಅಧಿಕ ಕುಟುಂಬಗಳಿಗೆ ಸೌರ ಬೆಳಕು ನೀಡಲಾಗಿದ್ದು, ಮಾಸಾಂತ್ಯದೊಳಗೆ ಉಳಿದ ಫಲಾನುಭವಿ ಮನೆಗಳಿಗೂ ಸೌರ ಬೆಳಕು ಬೆಳಗಲಿದೆ.
ನಮ್ಮನೆ ಹಬ್ಬದಲ್ಲಿ ಘೋಷಣೆ: ಕಳೆದ ವರ್ಷ ಡಿಸೆಂಬರ್ನಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ನಡೆಸಿದ ನಮ್ಮನೆ ಹಬ್ಬದ ದಶಮಾನೋತ್ಸವದಲ್ಲಿ ನಮ್ಮನೆ ಪ್ರಶಸ್ತಿ ಸ್ವೀಕರಿಸಿದ್ದ ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಅವರು ಟ್ರಸ್ಟ್ ಆಯ್ಕೆ ಮಾಡಿಕೊಟ್ಟ ಓದುವ ಮಕ್ಕಳಿರುವ ಐದು ಕುಟುಂಬಗಳಿಗೆ ಉಚಿತವಾಗಿ ಸೌರ ಬೆಳಕಿನ ನೆರವು ಒದಗಿಸುವುದಾಗಿ ಪ್ರಕಟಿಸಿದ್ದರು. ಆ ಯೋಜನೆ ಇಂದು ಕರ್ನಾಟಕ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬಂದಿದೆ.
ಆಯ್ಕೆಗೆ ಹೊಸ ಮಾರ್ಗ!: ಫಲಾನುಭವಿಗಳ ಆಯ್ಕೆಗೆ ವಿಶ್ವಶಾಂತಿ ಸೇವಾ ಟ್ರಸ್ಟ್ ಹೊಸ ವಿಧಾನ ಅನುಸರಿಸಿತು. ಶಿಕ್ಷಣ ಇಲಾಖೆ ಮೂಲಕ ವಿದ್ಯಾರ್ಥಿಗಳ ಆಯ್ಕೆ, ಹೆಸ್ಕಾಂ, ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಪ್ರಮುಖರ ಮೂಲಕ ಅರ್ಹ ಕುಟುಂಬಗಳ ಆಯ್ಕೆಗೆ ಯೋಜಿಸಿತು.
ಶಿಕ್ಷಣ ಇಲಾಖೆ ಡಿಡಿಪಿಐ ಬಸವರಾಜು, ಬಿಇಒ ಎಂ. ಎಸ್. ಹೆಗಡೆ, ಹೆಸ್ಕಾಂ ಅಧಿಕಾರಿಗಳಾದ ಧರ್ಮ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಹುಬ್ಬಳ್ಳಿಯ ಉದ್ಯೋಗಿ ಜಗನ್ನಾಥ ಎಂ.ಪಿ., ಭಾಗವತರಾದ ಕೇಶವ ಹೆಗಡೆ ಕೊಳಗಿ, ತುಳಗೇರಿ ಗಜಾನನ ಹೆಗಡೆ, ಕಲಾವಿದ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ಲಕ್ಷ್ಮೀ ನಾರಾಯಣ ಶಿರಗುಣಿ, ಅಂಕಣಕಾರ ವೈಶಾಲಿ ವಿ.ಪಿ. ಹೆಗಡೆ, ಗ್ರಾಪಂ ಸದಸ್ಯ ಸಂದೇಶ ಭಟ್ಟ ಬೆಳಖಂಡ ಸೇರಿದಂತೆ ಇತರರು ಫಲಾನುಭವಿಗಳ ಆಯ್ಕೆಗೆ ನೆರವಾದರು.
ಹೇಳಿದ್ದು ಐವರಿಗೆ, ಕೊಟ್ಟಿದ್ದು 10 ಕುಟುಂಬಕ್ಕೆ!: ಸೆಲ್ಕೊ ಸಂಸ್ಥೆಯ ಸಿಇಒ ಮೋಹನ ಹೆಗಡೆ ಅವರು ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅಡಿಯಲ್ಲಿ ಐದು ಕುಟುಂಬಗಳಿಗೆ ಬೆಳಕು ನೀಡುವ ಪ್ರಸ್ತಾಪ ಮಾಡಿದ್ದರು. ಆದರೆ, ಆಯ್ಕೆ ವೇಳೆ ಐದಕ್ಕಿಂತ ಅಧಿಕ ಕುಟುಂಬಗಳು ಸಿಕ್ಕ ಕಾರಣಕ್ಕೆ ಇನ್ನೂ ಹೆಚ್ಚುವರಿಯಾಗಿ ಒಟ್ಟೂ ಹತ್ತು ಕುಟುಂಬಗಳಿಗೆ ನೆರವಾಗುವ ವಾಗ್ಧಾನ ನೀಡಿದರು !
ಕಾಡಿನ ನಡುವೆ ಇರುವ ಮನೆಗೆ ಬೆಳಕಿಲ್ಲದೇ, ಮಕ್ಕಳನ್ನು ಬಂಧುಗಳ ಮನೆಯಲ್ಲಿ ಉಳಿಸಿ ಕಳಿಸುತ್ತಿರುವವರು, ಓದಲು ಸೀಮೆ ಎಣ್ಣೆ ದೀಪಕ್ಕೂ ತತ್ವಾರ ಪಡುವ ಕುಟುಂಬಗಳು, ಪಕ್ಕದ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದು ಒಂದು ಬಲ್ಬ ಹಾಕಿಕೊಂಡವರು, ವೃದ್ಧರಾದ ಅಜ್ಜಿ, ಮೊಮ್ಮಕ್ಕಳು ಇದ್ದರೂ ತಾಂತ್ರಿಕ ಕಾರಣದಿಂದ ಬೆಳಕು ಸಿಗದವರು, ಆಧಾರ ಕಾರ್ಡ್ನ ಹೆಸರು ವ್ಯತ್ಯಾಸದಿಂದ ಬೆಳಕು ಸಿಗದವರು, ಕುಟುಂಬದ ಆಧಾರದ ಅಪ್ಪನಿಗೇ ಆರೋಗ್ಯ ಸಮಸ್ಯೆ ಇದ್ದೂ ಸಾಧನೆ ಮಾಡಿದ ವಿದ್ಯಾರ್ಥಿನಿ, ಕರೆಂಟ್ ಇದ್ದೂ ಗಾಳಿ ಮಳೆ ಬಂದರೆ ಕೈಕೊಡುವ ಬೆಳಕಿನ ಮನೆಗೆ, ಹೀಗೆ ಎಲ್ಲ ಬಗೆಯ ಸಮಸ್ಯೆ ಉಳ್ಳವರೂ ಫಲಾನುಭವಿ ಆಯ್ಕೆ ಪಟ್ಟಿಯಲ್ಲಿ ಇದ್ದರು. ನಾಲ್ಕಕ್ಕೂ ಅಧಿಕ ಮಕ್ಕಳ ಕುಟುಂಬಕ್ಕೆ ಬೆಳಕಿಲ್ಲ, ಬೆಳಕಿನ ತೊಂದರೆ ಇರುವುದನ್ನು ಸ್ವತಃ ಆಯಾ ಶಾಲಾ ಮುಖ್ಯಾಧ್ಯಾಪಕರೂ ಶಿಫಾರಸ್ಸು ಮಾಡಿದ್ದೂ ವಿಶೇಷವೇ ಆಗಿದೆ.
ಯಾರಿಗೆಲ್ಲ ಬೆಳಕಿನ ಸ್ಪರ್ಶ?: ಶಿರಸಿ ನಗರದಿಂದ ದೂರ ಇರುವ ಶಿರಗುಣಿ ಸಮೀಪದ ರಾಯರಮನೆ ಮಂಜುನಾಥ ಗೌಡ, ಸುಮಿತ್ರಾ ಮರಾಠಿ ಬಾಳೆಕಾಯಿಮನೆ, ದಿನೇಶ ಅರಸಿಕೆರೆ, ರಮ್ಯಾ ಮರಾಠಿ ಬಾಳೆಕಾಯಿಮನೆ, ಶಿರಸಿ, ಕರಿಗುಂಡಿ ಸೀತಾ ಜೋಗಳೇಕರ್, ಸಿದ್ದಾಪುರದ ಕಲಾವಿದ, ಗೃಹೋದ್ಯೋಗಿ ವೆಂಕಟ್ರಮಣ ಹೆಗಡೆ ಮಾದಿನಕಳ್ಳು, ಯಲ್ಲಾಪುರ ಹೆಮ್ಮಾಡಿ ಸಿಂಧೂ ಮಧುಕೇಶ್ವರ ನಾಯ್ಕ, ಬನವಾಸಿ ಭಾಸಿ ಸಣ್ಮನೆ ಸಂದೇಶ ಕಾಳೇನರ್, ರಮ್ಯಾ ಬಂದಿಗೇರ ಸಣ್ಮನೆ, ಅಂಕೋಲಾದ ಅಚವೆ ತಿಮ್ಮಾ ಗೌಡ ಹುಡಗೋಡ ಕುಟುಂಬ ಆಯ್ಕೆ ಆಗಿದೆ.
ಕರೆಂಟ್ ಇಲ್ಲದೇ ಮಕ್ಕಳಿಗೆ ಓದುವ ಸಮಸ್ಯೆ ಆಗುತ್ತಿತ್ತು. ಪರೀಕ್ಷೆ ಎದುರಿಗೇ ಕರೆಂಟ್ ಇರುತ್ತಿರಲಿಲ್ಲ, ಬೆಳಕು ನೀಡಿ ಉಪಕಾರ ಆಗಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಸಂಸ್ಥೆಯ ನೆರವಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅನ್ವಯ ಈ ಕೆಲಸ ಆಗಿದೆ. ಬ್ಯಾಂಕ್ನ ಎಂ.ಡಿ. ಮಹಾಬಲೇಶ್ವರ ಅವರ ಅತ್ಯಂತ ಯಶಸ್ವೀ ಕನಸು ಇದು. ಬೆಳಕಿಲ್ಲದೇ ವಿದ್ಯಾಭ್ಯಾಸಕ್ಕಾಗಿ ಅವರು ಪಡುತ್ತಿರುವ ಶ್ರಮ ಇದರಿಂದ ಪರಿಹಾರ ಆಯಿತು ಎಂಬುದು ಸಮಾಧಾನ. -ಮೋಹನ ಭಾಸ್ಕರ ಹೆಗಡೆ, ಸಿಇಒ ಸೆಲ್ಕೋ ಇಂಡಿಯಾ
ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆ ಉಳಿಸಬೇಕು ಎಂದು ಆರಂಭಿಸಿದ ನಮ್ಮನೆ ಹಬ್ಬ ಈಗ ಹತ್ತು ಕುಟುಂಬಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೊ ಸಂಸ್ಥೆ ಮೂಲಕ ಮನೆಗಳಿಗೆ ಬೆಳಕಾಗುತ್ತಿರುವುದು ಖುಷಿ ತಂದಿದೆ. –ಗಾಯತ್ರೀ ರಾಘವೇಂದ್ರ, ಟ್ರಸ್ಟ್ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ