ದಸರಾ ರಜೆ : ದ.ಕ.ದಲ್ಲಿ ಸೆ. 26ರಿಂದ ಅ.10ರ ವರೆಗೆ ,ಉಡುಪಿಯಲ್ಲಿ ಅ.3ರಿಂದ 16ರ ವರೆಗೆ ರಜೆ
Team Udayavani, Sep 13, 2022, 9:15 AM IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ. 26ರಿಂದ ಅಕ್ಟೋಬರ್ 10ರ ವರೆಗೆ ರಜೆ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆದೇಶ ಹೊರಡಿಸಿದ್ದಾರೆ.
ಸಚಿವರೊಂದಿಗೆ ಚರ್ಚಿಸಿರುವ ಶಾಸಕ ವೇದವ್ಯಾಸ್ ಕಾಮತ್ ಅವರು ಹಬ್ಬಕ್ಕೆ ಪೂರಕವಾಗುವಂತೆ ರಜೆ ನೀಡಲು ಮನವಿ ಮಾಡಿಕೊಂಡಿದ್ದರು.ಅದಕ್ಕೆ ಸ್ಪಂದಿಸಿರುವ ಸಚಿವರು ಅಕ್ಟೋಬರ್ 2ರ ಗಾಂಧಿ ಜಯಂತಿಯ ದಿನವನ್ನು ಹೊರತುಪಡಿಸಿ ದಸರಾ ರಜೆ ನೀಡುವಂತೆ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಸೆ. 26ರಿಂದ ನವರಾತ್ರಿ ಪ್ರಾರಂಭವಾಗುತ್ತಿದ್ದು, ಅದ್ದೂರಿಯಾಗಿ ನಡೆಯುವ ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದಾ ಮಹೋತ್ಸವ, ಮಂಗಳಾದೇವಿ ದೇವಸ್ಥಾನದ ನರವಾತ್ರಿ ಸೇರಿದಂತೆ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮದಲ್ಲಿ
ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ರಜೆಯನ್ನು ಹಬ್ಬದ ಸಂದರ್ಭದಲ್ಲಿಯೇ ನೀಡುವಂತೆ ಮನವಿ ಮಾಡಿದ್ದೆವು ಎಂದರು.
ಉಡುಪಿಯಲ್ಲಿ ಅ. 3ರಿಂದ 16ರ ವರೆಗೆ ರಜೆ
ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಅಕ್ಟೋಬರ್3ರಿಂದ 16ರ ವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗುತ್ತದೆ. ಮಂಗಳೂರಿನಲ್ಲಿ ಸ್ಥಳೀಯ ಶಾಸಕರ ಮನವಿಯಂತೆ ರಜೆ ದಿನಾಂಕ ಬದಲಾವಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಿಂದ ಆ ರೀತಿಯ ಯಾವುದೇ ಪ್ರಸ್ತಾವನೆ ಹೋಗದೇ ಇರುವುದರಿಂದ ಇಲಾಖೆಯ ಪೂರ್ವ ನಿಗದಿತ ದಿನಾಂಕದಿಂದಲೇ ದಸರಾ ರಜೆ ಆರಭವಾಗಲಿದೆ. ಹಾಗೆಯೇ ನವರಾತ್ರಿ ಉತ್ಸವಕ್ಕೆ ಸರಿ ಹೊಂದುವ ರೀತಿಯಲ್ಲಿ ರಜೆ ಹೊಂದಾಣಿಕೆ ಮಾಡಲು ಜಿಲ್ಲಾಧಿಕಾರಿಯವರಿಗೆ ಅವಕಾಶ ನೀಡಲಾಗಿದೆ. ಆದರೆ ಇದರಿಂದ ಶೈಕ್ಷಣಿಕ ತರಗತಿಗಳಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ : ಕಾರ್ಕಳ : ಖಾಸಗಿ ಬಸ್ – ಪಿಕಪ್ ಮುಖಾಮುಖಿ ಢಿಕ್ಕಿ, ಪಿಕಪ್ ಚಾಲಕ ಸಾವು