ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ: ಆರೋಪಿ ಬಂಧನ
Team Udayavani, Sep 18, 2022, 12:35 PM IST
ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಕಳ್ಳನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬಸವನಪುರದದ ತೌಹಿದ್(20) ಬಂಧಿತ. ಆರೋಪಿಯಿಂದ 300 ಗ್ರಾಂ ಚಿನ್ನಾಭರಣ, 100 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ಕಾರು ಹಾಗೂ ಕಬ್ಬಿಣದ ರಾಡ್ಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಜೂನ್ 10ರಂದು ವಿಶ್ವೇಶ್ವರಯ್ಯ ಲೇಔಟ್ನ 9ನೇ ಬ್ಲಾಕ್ನ ಮನೆಯೊಂದರ ಬೀಗ ಮೀಟಿ ಕಳವು ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವೃತ್ತಪರ ಕಳ್ಳನಾಗಿದ್ದು, ಈತನ ವಿರುದ್ಧ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಮನೆಗಳವು ಪ್ರಕರಣ ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ಮನೆ ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ಸ್ನೇಹಿತರಿಂದ ಕಾರನ್ನು ಬಾಡಿಗೆ ಪಡೆದು ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ. ಬಳಿಕ ಕಬ್ಬಿಣದ ರಾಡ್ ಬಳಸಿ ಬೀಗ ಒಡೆದು ಮನೆ ಪ್ರವೇಶಿಸಿ ನಗದು, ಚಿನ್ನಾಭರಣ ಸೇರಿ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಆರೋಪಿ ಕಾರನ್ನು ಬಾಡಿಗೆಗೆ ಪಡೆದು ಕಳ್ಳತನಕ್ಕೆ ತೆರಳುವುದು ಸ್ನೇಹಿತರಿಗೆ ಗೊತ್ತಿರಲಿಲ್ಲ. ಕಳ್ಳತನ ಮಾಡಿಕೊಂಡು ಬಂದ ಬಳಿಕ ಬಾಡಿಗೆ ಸಹಿತ ಕಾರನ್ನು ಸ್ನೇಹಿತರಿಗೆ ಹಿಂದಿರುಗಿಸುತ್ತಿದ್ದ. ಆರೋಪಿ ದಾವಣಗೆರೆ ಜಿಲ್ಲೆಯ ವಿದ್ಯಾನಗರ ಮತ್ತು ಚಿತ್ರದುರ್ಗದ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಮಾಡಿದ್ದಾನೆ. ಅದಕ್ಕೆ ಸಹಚರರಾದ ಮುಹೀಬುಲ್ಲಾ ಮತ್ತು ಇಮ್ರಾನ್ ಸಹಕಾರ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.