ಮಲ್ಪೆ: ಹೋದೀತು ಜಲಚರಗಳ ಜೀವ
ಹರಿದ ಬಲೆಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಕಡಲಿಗೆ ಎಸೆಯದಿರಿ
Team Udayavani, Sep 23, 2022, 2:53 PM IST
ಮಲ್ಪೆ: ಸಮುದ್ರದಲ್ಲಿ ಅಂಗಾಂಗ ಘಾಸಿಗೊಂಡು ಈಜಲಾರದೆ ಅಸಹಾಯಕ ಪರಿಸ್ಥಿತಿಯಲ್ಲಿ ಕಡಲ ತಡಿಯಲ್ಲಿ ಕಡಲಾಮೆಗಳು, ತಿಮಿಂಗಿಲಗಳು ಪತ್ತೆಯಾದ ಘಟನೆಗಳು ಆಗಾಗ ಕಂಡು ಬರುತ್ತಿವೆ.
ನದಿಯಲ್ಲಿ ಎಸೆದ ಬಲೆಗಳು ಕಡಲ ಗರ್ಭವನ್ನು ಸೇರಿ ಇಂತಹ ಜಲಚರಗಳಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಹರಿದ ಬಲೆಯಲ್ಲಿ ಸಿಲುಕಿದ ಕಡಲಾಮೆಗಳು ನರಳಾಟಿಕೆಯಿಂದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.
ಅಬ್ಬರದ ಕಡಲ ಅಲೆಗಳನ್ನು ಎದುರಿಸಲಾಗದೆ ಕಡಲತಡಿಯ ಮರಳ ರಾಶಿಯಲ್ಲಿ ಆಶ್ರಯ ಪಡೆಯಲು ಬರುತ್ತವೆ. ಸಮುದ್ರಕ್ಕೆ ಹರಿದು ಬರುತ್ತಿರುವ ಪ್ಲಾಸ್ಟಿಕ್ ಬಲೆಗಳು, ಪ್ಲಾಸ್ಟಿಕ್ ಹಗ್ಗಗಳು ಇತರ ಆಹಾರ ವಸ್ತುಗಳೊಂದಿಗೆ ಆಮೆ, ತಿಮಿಂಗಿಲಗಳ ಹೊಟ್ಟೆಯನ್ನು ಸೇರುತ್ತದೆ ಎನ್ನಲಾಗಿದೆ.
ಕಳೆದ ವರ್ಷ ಮಲ್ಪೆ ಸೀವಾಕ್, ತೊಟ್ಟಂ ಹೂಡೆ ಪರಿಸರದಲ್ಲಿ ಸತ್ತು ಬಿದ್ದಿರುವ ತಿಮಿಂಗಿಲ ಕಾಣಸಿಕ್ಕಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಜಾಗೃತಿ ಅಗತ್ಯ
ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಕಡಲಾಮೆಗಳ ಬಗ್ಗೆ ಸಾರ್ವ ಜನಿಕರಿಗೆ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಪ್ರಯತ್ನ ಮಾಡಬೇಕಾಗಿದೆ. ಜತೆಗೆ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆಗಳು ಸಾರ್ವಜನಿಕರಲ್ಲಿ ಕಡಲ ಜೀವ ವೈವಿಧ್ಯತೆಯ ರಕ್ಷಣೆಯ ಕುರಿತು ಅರಿವು ಮೂಡಿಸ ಬೇಕಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ನದಿ, ಹೊಳೆಗಳಿಗೆ ಕಸ ಎಸೆಯದಂತೆ ಜಾಗೃತಿ ಅಗತ್ಯ: ನದಿಯಲ್ಲಿ ಎಸೆದ, ಪ್ಲಾಸ್ಟಿಕ್, ಬಾಟಲಿ, ಚಪ್ಪಲಿಗಳು, ಟೂತ್ಬ್ರೆಷ್ಗಳು ರಾಶಿ ರಾಶಿ ಕಡಲಗರ್ಭ ಸೇರುತಿದ್ದು, ಇವುಗಳು ಜಲಚರಗಳಿಗೆ ಮಾರಕವಾಗುತ್ತದೆ. ಜನರು ಸಮುದ್ರ ತೀರ ಸ್ವಚ್ಛತೆ ಮಾಡುವುದಕ್ಕಿಂತ ನದಿ, ಹೊಳೆಗೆ ಕಸ ಎಸೆಯುವುದನ್ನು ನಿಲ್ಲಿಸುವಂತೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಿದರೆ ಒಳಿತು. ಏಕೆಂದರೆ ನದಿಗಳ ಮೂಲಕ ಬಂದ ಕಸಗಳೇ ಸಮುದ್ರ ಗರ್ಭವನ್ನು ಸೇರಿ ಜಲಚರ ನಾಶಕ್ಕೆ ಕಾರಣವಾಗುತ್ತದೆ. -ಮಂಜು ಕೊಳ, ಸ್ಥಳೀಯ ಸಮಾಜಸೇವಕ