ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ: ಸಿದ್ದರಾಮಯ್ಯ
Team Udayavani, Sep 26, 2022, 10:23 PM IST
ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸೋಮವಾರ ಪ್ರವಾಸ ಕೈಗೊಂಡ ಅವರು ಚಿಕ್ಕಹೊಮ್ಮ ಕೆರೆಗೆ ಬಾಗಿನ ಸಮರ್ಪಿಸಿದ ಬಳಿಕ ಅವರು ಮಾತನಾಡಿದರು. ವರುಣಾದಲ್ಲಿ ಸ್ಪರ್ಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಈಗ ಶಾಸಕರಿದ್ದಾರಲ್ಲಾ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆಮೇಲೆ ನೋಡೋಣ. ಅವರು ಮತ್ತೆ ಶಾಸಕರಾಗಬೇಕೋ, ಬೇಡವೋ ಎಂದು ಕೇಳಿದರು.
ಇಲ್ಲಿ ಸ್ಪರ್ಧಿಸುವಂತೆ ನೀವು ಕೇಳುತ್ತಿದ್ದೀರಿ. ಬಾದಾಮಿ ಕ್ಷೇತ್ರದವರು ಅಲ್ಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಕೋಲಾರ, ಚಾಮರಾಜಪೇಟೆಯವರೂ ಕೇಳುತ್ತಿದ್ದಾರೆ. ಹೈಕಮಾಂಡ್ನವರು ವರುಣಾದಲ್ಲಿ ನಿಲ್ಲಿ ಎಂದರೂ ನಿಲ್ಲುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಹೋದ ಬಾರಿ ಕೊನೆ ಚುನಾವಣೆಯಾದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲೋಣ ಎಂದು ಅಲ್ಲಿಗೆ ಹೋಗಿದ್ದೆ. ಆದರೆ, ನನ್ನನ್ನು ಸೋಲಿಸಲು ಬಿಜೆಪಿಯವರು ಸೇರಿದಂತೆ ಎಲ್ಲರೂ ಒಂದಾದರು. ಆದ್ದರಿಂದ, ಬಾದಾಮಿಯಲ್ಲೂ ಸ್ಪರ್ಧಿಸಿದೆ. ದೂರದ ಬಾಗಲಕೋಟೆಯ ಜನರು ನನ್ನ ಕೈಹಿಡಿದರು. ಆದರೆ, ಬಹಳ ಕೆಲಸ ಮಾಡಿಕೊಟ್ಟರೂ ಚಾಮುಂಡೇಶ್ವರಿಯವರು ಕೈಹಿಡಿಯಲಿಲ್ಲ. ಒಂದು ವೇಳೆ ವರುಣಾದಲ್ಲೇ ನಿಂತಿದ್ದರೆ ನೀವು ಮತ್ತೆ ಗೆಲ್ಲಿಸಿಯೇ ಗೆಲ್ಲಿಸುತ್ತಿದ್ದಿರಿ ಎಂದು ಹೇಳಿದರು.
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ
ಕೋಲಾರ: 2023ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಖಚಿತ ಅವರೊಟ್ಟಿಗೆ ಎಲ್ಲರೂ ಜತೆಯಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ ಎಂದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು
ತಾಲೂಕಿನ ಹುತ್ತೂರು ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ಸೋಮವಾರ ಸುಮಾರು 40 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಬರಡು ಭೂಮಿಗೆ 1400 ಕೋಟಿ ಖರ್ಚು ಮಾಡಿ ಕೆ.ಸಿ ವ್ಯಾಲಿ ನೀರು ತಂದಿದ್ದು ಸಿದ್ದರಾಮಯ್ಯ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರ ಪ್ರಾಮಾಣಿಕ ಪ್ರಯತ್ನಕ್ಕೆ ಸಿದ್ದರಾಮಯ್ಯ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಜನ ಪûಾತೀತವಾಗಿ ಅವರನ್ನು ಬೆಂಬಲಿಸಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.