ಕಾನ್ಪುರ ದುರಂತ ಯುಪಿಯ ರಸ್ತೆಗಳ ದುಃಸ್ಥಿತಿಯ ಪರಿಣಾಮ: ಅಖಿಲೇಶ್ ಆಕ್ರೋಶ
ಬಿಜೆಪಿ ಸರಕಾರದಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ಆಂಬ್ಯುಲೆನ್ಸ್ ಕೂಡ ಸಿಗುತ್ತಿಲ್ಲ
Team Udayavani, Oct 2, 2022, 6:57 PM IST
ಲಕ್ನೋ: ಕಾನ್ಪುರ ದುರಂತವು ರಾಜ್ಯದ ರಸ್ತೆಗಳ ದುಃಸ್ಥಿತಿಯ ಪರಿಣಾಮವಾಗಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಸ್ಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಹೇಳಿಕೆ ನೀಡಿರುವ ಅಖಿಲೇಶ್, ಕಾನ್ಪುರ ಘಟನೆಯಲ್ಲಿ 26 ಜನರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಮೋಟಾರ್ ಸೈಕಲ್ಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಿಜೆಪಿ ಸರಕಾರದಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ಆಂಬ್ಯುಲೆನ್ಸ್ ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಲಾಯಂ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಉತ್ತರಪ್ರದೇಶದಾದ್ಯಂತ ರಸ್ತೆಗಳು ಹಾಳಾಗಿವೆ ಮತ್ತು ಆಳವಾದ ಗುಂಡಿಗಳಿಂದ ಕೂಡಿವೆ. ಬಿಜೆಪಿ ಸರ್ಕಾರದ ವೈಫಲ್ಯಗಳ ಹೊರೆಯನ್ನು ಸಾರ್ವಜನಿಕರು ಹೊರುತ್ತಿರುವುದು ಬೇಸರದ ಸಂಗತಿ’ ಎಂದು ಅಖಿಲೇಶ್ ಹೇಳಿದರು.
ಜೀವಗಳು ಕಳೆದುಹೋಗುತ್ತಿವೆ ಮತ್ತು ಸರ್ಕಾರಕ್ಕೆ ಮಾಹಿತಿಯಿಲ್ಲ, ಇದು ತೀವ್ರ ಕಳವಳಕಾರಿ ವಿಷಯವಾಗಿದೆ.ಎಂದ ಅಖಿಲೇಶ್ ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 5 ಲಕ್ಷ ಧನಸಹಾಯ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾನ್ಪುರ ಘಟನೆಯ ಬಗ್ಗೆ ತಕ್ಷಣ ಗಮನ ಹರಿಸಿ ಎಸ್ ಪಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಶನಿವಾರ ಕಾನ್ಪುರ ಜಿಲ್ಲೆಯಲ್ಲಿ ಪ್ರಯಾಣಿಕರನ್ನು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು ಕೆರೆಗೆ ಬಿದ್ದ ಪರಿಣಾಮ 26 ಮಂದಿ ಸಾವನ್ನಪ್ಪಿದ್ದರು.