ಪ್ರಧಾನಿ ಸಮ್ಮುಖದಲ್ಲಿ ಇಂದು ಕಾರ್ಯಕ್ರಮನೀಡಲಿದೆ ಬುಡಕಟ್ಟು ಮಕ್ಕಳ ತಂಡ
Team Udayavani, Oct 31, 2022, 7:30 AM IST
ಅಹಮದಾಬಾದ್: ಗುಜರಾತ್ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದ ಬುಡಕಟ್ಟು ಮಕ್ಕಳ ಸಂಗೀತ ತಂಡ ಅ.31ರಂದು ಕೆವಾಡಿಯಾದಲ್ಲಿ ಪ್ರಧಾನ ಮಂತ್ರಿಯವರ ಮುಂದೆ ಕಾರ್ಯಕ್ರಮ ನೀಡಲಿದೆ.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲಭಭಾಯ್ ಪಟೇಲ್ ಅವರ 147ನೇ ಜನ್ಮದಿನ ಪ್ರಯುಕ್ತ ಏಕತಾ ಪ್ರತಿಮೆ ಬಳಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. ಪ್ರಧಾನಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ.
ಸೆ.30ರಂದು ಪ್ರಧಾನಮಂತ್ರಿಯವರು ಗುಜರಾತ್ನ ಅಂಬಾಜಿಗೆ ಭೇಟಿ ನೀಡಿದಾಗ ಇದೇ ತಂಡ ಕಾರ್ಯಕ್ರಮ ನೀಡಿ, ಅವರ ಮೆಚ್ಚುಗೆ ಗಳಿಸಿಕೊಂಡಿತ್ತು. ಸಂತೋಷಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ತಂಡದ ಸದಸ್ಯರ ಜತೆಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡಿದ್ದರು.
ಅಸಾಧಾರಣ ಸಂಗೀತ ಕೌಶಲ್ಯಗಳನ್ನು ಕಲಿತ ಈ ಬುಡಕಟ್ಟು ಮಕ್ಕಳ ಯಶೋಗಾಥೆ ಅದ್ಭುತವಾಗಿದೆ. ಈ ಮಕ್ಕಳು ಮೂಲಭೂತ ಅಗತ್ಯಗಳಿಗಾಗಿ, ಶಿಕ್ಷಣ ಪಡೆಯುವ ಅವಕಾಶಕ್ಕಾಗಿ ಹೋರಾಡುತ್ತಿದ್ದರು. ಅವರು ಆಗಾಗ್ಗೆ ಅಂಬಾಜಿ ದೇವಾಲಯದ ಬಳಿ ಕಾಣಿಸಿಕೊಂಡು ಭಿಕ್ಷೆ ಬೇಡುತ್ತಿದ್ದರು. ಅಂಬಾಜಿಯಲ್ಲಿರುವ ಶ್ರೀ ಶಕ್ತಿ ಸೇವಾ ಕೇಂದ್ರ ಎಂಬ ಸ್ಥಳೀಯ ಎನ್ಜಿಒ ಈ ಮಕ್ಕಳಿಗಾಗಿ ಕೆಲಸ ಮಾಡಿತು. ಅವರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರಲ್ಲಿರುವ ಉತ್ತಮ ಕೌಶಲ್ಯಗಳನ್ನು ಗುರುತಿಸಲು ಸಹ ನೆರವು ನೀಡಿತು. ಸಂಗೀತ ತಂಡದ ಬುಡಕಟ್ಟು ಮಕ್ಕಳಿಗೆ ಶ್ರೀ ಶಕ್ತಿ ಸೇವಾ ಕೇಂದ್ರ ಎನ್ಜಿಒ ಕೌಶಲ್ಯವನ್ನು ಸಹ ಒದಗಿಸಿತು.