ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದದ್ದು ತಪ್ಪು: ಸಿ.ಎಂ. ಇಬ್ರಾಹಿಂ
Team Udayavani, Nov 16, 2022, 9:23 PM IST
ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದದ್ದು ತಪ್ಪು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಟಿಪ್ಪು ಜಯಂತಿ ಮಾಡಿದ್ದು ತಪ್ಪು. ನಮ್ಮಲ್ಲಿ ಜಯಂತಿ ಆಚರಣೆ ಇಲ್ಲ. ನಾನು ಟಿಪ್ಪು ಜಯಂತಿ ಬೇಡ ಎಂದು ಹೇಳಿದ್ದೆ. ಮತದ ಕಾರಣ ಟಿಪ್ಪು ಜಯಂತಿ ಮಾಡಿದರು ಎಂದು ಟೀಕಿಸಿದರು.
ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರ ನೂರಡಿ ಪ್ರತಿಮೆ ನಿರ್ಮಿಸುವುದಾಗಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ನೀಡಿರುವ ಹೇಳಿಕೆಯನ್ನು ಇಬ್ರಾಹಿಂ ವಿರೋಧಿಸಿದರು. ಪ್ರತಿಮೆಗೆ ನಮ್ಮಲ್ಲಿ ಅವಕಾಶವಿಲ್ಲ. ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ಬಡವರಿಗೆ ಸಹಾಯ ಮಾಡುವುದು ನಮ್ಮಲ್ಲಿರುವುದು. ಇದೇ ನಮ್ಮಲ್ಲಿರುವ ಆಚರಣೆ. ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲಿಯಾದರೂ ನಮ್ಮ ಪ್ರತಿಮೆ ಇರುವುದನ್ನು ತೋರಿಸಿ ಎಂದರು.