ಕುಕ್ಕೆ: ಬೀದಿ ಉರುಳು ಸೇವೆ ಪ್ರಾರಂಭ: ಅನ್ಯಮತೀಯರಿಂದ ವ್ಯಾಪಾರಕ್ಕೆ ನಿಷೇಧ?
Team Udayavani, Nov 25, 2022, 6:30 AM IST
ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆಯು ಬುಧವಾರ ರಾತ್ರಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಆರಂಭವಾಯಿತು.
ಗುರುವಾರ ಮುಂಜಾನೆ ಮತ್ತು ಸಂಜೆ ಕೆಲವು ಭಕ್ತರು ಸೇವೆ ನೆರವೇರಿಸಿದರು. ಈ ಸೇವೆಯು ಷಷ್ಠಿಯಂದು ಮಹಾರಥೋತ್ಸವ ಎಳೆಯುವ ತನಕ ನಡೆಯಲಿದೆ. ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಈ ಸೇವೆ ನೆರವೇರುತ್ತದೆ. ಭಕ್ತರು ಕುಮಾರಧಾರೆಯಲ್ಲಿ ಮಿಂದು ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳುತ್ತ ಬಂದು ದೇವಸ್ಥಾನದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸೇವೆಗೆ ಯಾವುದೇ ರಶೀದಿ ಇಲ್ಲದಿದ್ದರೂ ದೇವಸ್ಥಾನದ ವತಿಯಿಂದ ಉರುಳುಸೇವೆಗೆ ಪ್ರತ್ಯೇಕ ಪಥ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಿರುವುದರಿಂದ ಸಂಜೆ ಅಥವಾ ಮುಂಜಾನೆ ವೇಳೆ ಆರಂಭಿಸುವಂತೆ ಮನವಿ ಮಾಡಲಾಗಿದೆ.
ಅನ್ಯಮತೀಯರಿಂದ ವ್ಯಾಪಾರಕ್ಕೆ ನಿಷೇಧ? :
ಚಂಪಾಷಷ್ಠಿ ಸಂದರ್ಭ ಅನ್ಯಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಕುಕ್ಕೆ ಕ್ಷೇತ್ರದ ಕುಮಾರಧಾರಾ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಕಂಡುಬಂದಿದೆ. ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಅಲ್ಲದೆ ಜಾತ್ರೆ ಸಂದರ್ಭ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸುಬ್ರಹ್ಮಣ್ಯ ಠಾಣೆಗೆ ಹಿಂಜಾವೇ ವತಿಯಿಂದ ಮನವಿ ಮಾಡಲಾಗಿದೆ ಎನ್ನಲಾಗಿದೆ.