ಭಾರತ್ ಜೋಡೋ ನಾಳೆ ದೆಹಲಿಗೆ ; ಕಾರ್ಯಕರ್ತರಿಗೆ ಮಾಸ್ಕ್ ಧರಿಸಲು ಸೂಚನೆ
ಮಹಾ ಅಭಿಯಾನದಲ್ಲಿ ಸೇರಿ ಎಂದು ಕಾಂಗ್ರೆಸ್ ಟ್ವೀಟ್
Team Udayavani, Dec 23, 2022, 6:40 PM IST
ನವದೆಹಲಿ : ನಾಳೆ ಡಿ.24ಕ್ಕೆ ಭಾರತ್ ಜೋಡೋ ಯಾತ್ರೆ ರಾಷ್ಟ್ರ ರಾಜಧಾನಿ ಪ್ರವೇಶಿಸಲಿದ್ದು, ದೆಹಲಿ ಕಾಂಗ್ರೆಸ್ ತನ್ನ ಪಕ್ಷದ ಕಾರ್ಯಕರ್ತರು ಮತ್ತು ಯಾತ್ರೆಯಲ್ಲಿ ಭಾಗವಹಿಸುವ ನಾಯಕರಿಗೆ ಮಾಸ್ಕ್ ಗಳನ್ನು ಧರಿಸಿ ಬರುವಂತೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
”ದೆಹಲಿಗೆ ನಾಳೆ ಭಾರತ್ ಜೋಡೋ ಯಾತ್ರೆ ಬರಲಿದೆ. ದೆಹಲಿಯ ಜನರೇ, ನಿಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸಿ ಭಾರತವನ್ನು ಒಗ್ಗೂಡಿಸುವ ಮಹಾ ಅಭಿಯಾನದಲ್ಲಿ ಸೇರಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಯಾತ್ರೆ ಹರಿಯಾಣದ ಮೂಲಕ ದೆಹಲಿಗೆ ಪ್ರವೇಶಿಸುತ್ತಿದೆ.
ಡಿಎಂಕೆ ನಾಯಕಿ ಕನಿಮೊಳಿ ಭಾಗಿ
ಇಂದು ಹರಿಯಾಣದಲ್ಲಿ ನಮ್ಮ ವೈವಿಧ್ಯತೆಯನ್ನು ಸಾರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು. ರಾಹುಲ್ ಗಾಂಧಿ ಅವರ ಭಾರತವನ್ನು ಒಗ್ಗೂಡಿಸುವ ದೃಷ್ಟಿಯನ್ನು ಭಾರತದ ಜನರು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಡಿಎಂಕೆ ನಾಯಕಿ ಕನಿಮೊಳಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರ ಪತ್ರದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ ”ಇದು ಭಾರತ್ ಜೋಡೋ ಯಾತ್ರೆಯನ್ನು ಕೆಣಕುವ ಬಿಜೆಪಿಯ ರಾಜಕೀಯ. ವೈಜ್ಞಾನಿಕ ತಳಹದಿ ಅಥವಾ ತಜ್ಞರ ಅಭಿಪ್ರಾಯಗಳ ಮೇಲೆ ಪ್ರೋಟೋಕಾಲ್ ಇದ್ದರೆ, ಭಾರತ್ ಜೋಡೋ ಯಾತ್ರೆ ಖಂಡಿತವಾಗಿಯೂ ಅದನ್ನು ಅನುಸರಿಸುತ್ತದೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ರಾಜ್ಯಗಳು ಜಾಗರೂಕರಾಗಿರಬೇಕು ಮತ್ತು ಕೋವಿಡ್ ನಿರ್ವಹಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಲಹೆ ನೀಡಿ, ಹಿಂದಿನ ಉಲ್ಬಣಗಳ ಸಮಯದಲ್ಲಿ ನಾವು ಮಾಡಿದಂತೆ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.