ಭ್ರಷ್ಟಾಚಾರಕ್ಕೆ ಕಡಿವಾಣ: ಪ್ರಮೋದ್ ಮುತಾಲಿಕ್
Team Udayavani, Mar 25, 2023, 7:40 AM IST
ಕಾರ್ಕಳ: ಹಿಂದುತ್ವ ಸಂರಕ್ಷಣೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣವೇ ಸ್ಪರ್ಧೆಯ ಉದ್ದೇಶ. ಕಾರ್ಕಳವೂ ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರಧಾನಿ ಮೋದಿಯ ತನಕ ಕೊಂಡೊಯ್ಯುವೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿ, ಪಡುಕಟ್ಟೆ ಕೆರೆಯ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ. ಕ್ರಷರ್ ಒಂದರ ಮೇಲೆ ದಾಳಿ ನಡೆಸಿ ವಶ ಪಡಿಸಿಕೊಂಡ 2 ಲಾರಿಗಳನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಿಟ್ಟು ಕಳುಹಿಸಲಾಗಿದೆ. ಆ ವ್ಯಾಪ್ತಿಯ ಶಿರಸ್ತೇದಾರರನ್ನು ನಿಯಮಬಾಹಿರವಾಗಿ ವರ್ಗಾಯಿಸಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಹಳೆಯ ದೇವಸ್ಥಾನದ ಬಳಿ ನಿಯಮ ಸ್ಥಳೀಯಾಡಳಿತದ ಆದೇಶವನ್ನೂ ಲೆಕ್ಕಿಸದೆ ಕಟ್ಟಡ ನಿರ್ಮಿಸಲಾಗುತ್ತಿದೆ. ಹಾಗಾದರೆ ಇದರ ಹಿಂದೆ ಇರುವ ಶಕ್ತಿ ಬಹಿರಂಗಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ನೀರೆ ಗ್ರಾಮದಲ್ಲಿ 25 ಮನೆಗಳಿಗೆ ಮಾತ್ರ ಪೈಪ್ ಹಾಕಿ, 80 ಮನೆಗಳಿಗೆ ಕಲ್ಪಿಸಿರುವುದಾಗಿ 35 ಲಕ್ಷ ರೂ. ಬಿಲ್ ಮಾಡಲಾಗಿದೆ. ಇದೇ ರೀತಿ ಹಲವೆಡೆ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ಇದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಅಡ್ಡ ಗೋಡೆ ಮೇಲೆ ದೀಪ
ಕಾರ್ಕಳದ ಬದಲಿಗೆ ಉಳ್ಳಾಲ ಕ್ಷೇತ್ರದಲ್ಲಿ ಸ್ಪರ್ಧಿಸಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ಹಿಂದುತ್ವಕ್ಕೆ ಧಕ್ಕೆಯಾದಾಗ ಕರಾವಳಿಯಲ್ಲಿ ಹಲವೆಡೆ ಭಾಷಣ ಮಾಡಿರುವೆ. ಆಗ ಉದ್ಭವವಾಗದ ಪ್ರಶ್ನೆ ಈಗ ಏಕೆ ಸೃಷ್ಟಿಯಾಗಿದೆ ಎಂದು ಪ್ರಶ್ನಿಸಿದರು. ನಿಮ್ಮನ್ನು ಯಾರಾದರೂ ಕಳುಹಿಸಿದ್ದಾರಾ ಎನ್ನುವ ಪ್ರಶ್ನೆಗೆ, ಎಲ್ಲವನ್ನೂ ಈಗ ಹೇಳಲಾಗದು ಎಂದು ಮುತಾಲಿಕ್ ಅಡ್ಡ ಗೋಡೆ ಮೇಲೆ ದೀಪವಿಟ್ಟರು.