G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?
ಇಂತಹ ಘಟನೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ
Team Udayavani, May 7, 2024, 10:26 PM IST
ಬೆಂಗಳೂರು: “ಕಾನೂನಾತ್ಮಕ ಸಂಸ್ಥೆ ಮೇಲೆಯೇ ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಅನುಮಾನಪಟ್ಟರೆ ಹೇಗೆ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ಗೃಹ ಸಚಿವ ಡಾ| ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇರಲಿ ಅಥವಾ ಸರಕಾರದ ವಿರುದ್ಧವೇ ಆರೋಪ ಇರಲಿ, ಎಸ್ಐಟಿ ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಸದಾಶಿವ ನಗರದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯಯವರ ಅಸಮಾಧಾನ ಸಹಜವೇ ಆಗಿದೆ. ಹಾಗಂತ ಕೋಪಗೊಂಡರೆ ಹೇಗೆ? ಇಂತಹ ಘಟನೆಯನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಪೆನ್ಡ್ರೈವ್ ಮೂಲದ ಬಗ್ಗೆ ಎಸ್ಐಟಿ ಗಮನಹರಿಸಲಿದೆ. ಅಲ್ಲದೆ ಡಿ.ಕೆ.ಶಿವಕುಮಾರ್ ಹಾಗೂ ಸರಕಾರದ ವಿರುದ್ಧ ಆರೋಪವಿದ್ದರೆ ಅದೂ ತನಿಖೆಯಿಂದ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅವಧಿಯಲ್ಲಿ ಉದ್ದೇಶಿತ ಪ್ರಕರಣದ ವೀಡಿಯೋ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೋಡೋಣ ಯಾರ ಅವಧಿಯಲ್ಲಿ ಆಗಿದ್ದು ಎಂಬುದು ಕೂಡ ತನಿಖೆಯಿಂದ ಗೊತ್ತಾಗಲಿದೆ. ಯಾವುದನ್ನೂ ಮುಚ್ಚಿಡಲು ಆಗುವುದಿಲ್ಲ ಎಂದ ಅವರು, ಬ್ಲೂ ಕಾರ್ನರ್ ನೋಟಿಸ್ ಸಿಬಿಐ ಹೊರಡಿಸಿರಬಹುದು. ಅದರ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.