ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ.. ದೆಹಲಿಗೆ ತೆರಳಿದ ಡಿಕೆಶಿ
Team Udayavani, May 16, 2023, 9:37 AM IST
ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಕಸರತ್ತು ಮುಂದುವರೆದಿದೆ. ದೆಹಲಿ ಅಂಗಳದಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರೆನ್ನುವ ನಿರ್ಣಯದ ಬಗ್ಗೆ ಮಂಗಳವಾರ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ದೆಹಲಿಗೆ ತಲುಪುವ ಮುನ್ನ ಡಿಕೆ ಶಿವಕುಮಾರ್ ಮಾಧ್ಯಮದವರ ಬಳಿ ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ. ದೇವರು ಮತ್ತು ತಾಯಿಗೆ ಮಕ್ಕಳಿಗೆ ಏನು ನೀಡಬೇಕು ಎಂಬುದು ಗೊತ್ತಿರುತ್ತದೆ. ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ.ನಾನು ಒಬ್ಬನೇ ಹೋಗುತ್ತಿದ್ದೇನೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಒಬ್ಬನೇ ಬರುವಂತೆ ಹೇಳಿದ್ದಾರೆ. ಹೀಗಾಗಿ ಒಬ್ಬನೇ ಹೋಗುತ್ತಿದ್ದೇನೆ ಎಂದು ಹೇಳಿದರು.
ಜನ ನಮಗೆ ನೀಡಿರುವ ಆಶೀರ್ವಾದ, ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಉಳಿಸಿ ಬೆಳೆಸಿಕೊಂಡು ಹೋಗಲು ನಾವು ಶ್ರಮಿಸಬೇಕಿದೆ. ನಾವು ಕಾನೂನು ಬದ್ಧವಾಗಿ ದೇಶದ ಸಂವಿಧಾನ ಉಳಿಸಲು, ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಲು ರಾಜ್ಯದ ಜನತೆ ಹಾಗೂ ತಾಯಿ ಚಾಮುಂಡೇಶ್ವರಿ ಅವರ ಆಶೀರ್ವಾದ ಇರಲಿ ಎಂದರು.
ಹೈಕಮಾಂಡ್ ಬಳಿ ಸಿಎಂ ಸ್ಥಾನ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರು ನನ್ನನ್ನು ಏಕಾಂಗಿಯಾಗಿ ಬರಲು ತಿಳಿಸಿದ್ದು, ಹೀಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ’ ಎಂದಷ್ಟೇ ತಿಳಿಸಿದರು.