Chitradurga; ಚಂದ್ರಪ್ಪರನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪ
ಗೆಲ್ಲಿಸುವುದಕ್ಕಿಂತ ಹೆಚ್ಚಾಗಿ ಬಂಡಾಯ ಸಾರಿದ್ದವರನ್ನು ತಣ್ಣಗಾಗಿಸುವ ದೊಡ್ಡ ಟಾಸ್ಕ್
Team Udayavani, Apr 1, 2024, 8:25 PM IST
ಬೆಂಗಳೂರು: ಚಿತ್ರದುರ್ಗ ಎಸ್ ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಬಂಡಾಯ ಸಾರಿದ್ದ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ಮನವೊಲಿಸಿ ತಣ್ಣಗಾಗಿಸುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೋಮವಾರ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಕೆಲಸ ಮಾಡಲು ಚಂದ್ರಪ್ಪ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಚಂದನ್ ಒಪ್ಪಿಗೆ ಸೂಚಿಸಿದ್ದಾರೆ.
ಎಂ. ಚಂದ್ರಪ್ಪ ಅವರು ಟಿಕೆಟ್ ಗೋವಿಂದ ಕಾರಜೋಳ ಅವರಿಗೆ ಘೋಷಣೆಯಾದ ಬಳಿಕ ಪಕ್ಷೇತರವಾಗಿ ಪುತ್ರ ರಘುಚಂದ್ರನ್ರನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಈಗ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ಗೋವಿಂದ ಕಾರಜೋಳ ಅವರು ಸ್ವಲ್ಪ ನಿರಾಳರಾಗಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಪಕ್ಷದ ಅಭ್ಯರ್ಥಿಗನ್ನು ಗೆಲ್ಲಿಸುವುದಕ್ಕಿಂತ ಹೆಚ್ಚಾಗಿ ಬಂಡಾಯ ಸಾರಿದ್ದವರನ್ನು ತಣ್ಣಗಾಗಿಸುವ ದೊಡ್ಡ ಟಾಸ್ಕ್ ಹೈಕಮಾಂಡ್ ಎದುರಿಟ್ಟಿದ್ದು ದಾವಣಗೆರೆ, ಬೆಳಗಾವಿ, ಕೊಪ್ಪಳ ಸೇರಿ ಹಲವು ಕ್ಷೇತ್ರಗಳಲ್ಲಿ ತಣ್ಣಗಾಗಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಈಶ್ವರಪ್ಪ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ ಮತ್ತು ಆ ಸಾಧ್ಯತೆಯೇ ಕಡಿಮೆ ಎನ್ನಲಾಗಿದೆ.