ಗಣರಾಜ್ಯೋತ್ಸವ ದಿನ ವೈಮಾನಿಕ ದಾಳಿ ನಡೆಸಲು ಉಗ್ರರ ಖತರ್ ನಾಕ್ ಸ್ಕೆಚ್!
Team Udayavani, Jan 25, 2017, 4:29 PM IST
ನವದೆಹಲಿ: ಗಣರಾಜ್ಯೋತ್ಸವದಂದು ಯೋಧರ ಸಮವಸ್ತ್ರ ಧರಿಸಿ ವೈಮಾನಿಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಸಂಚು ನಡೆಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ರಾಜಧಾನಿಯಲ್ಲಿ ಸಾವಿರಾರು ಪೊಲೀಸರು ಹಾಗೂ ಅರೆಸೇನಾ ಪಡೆಯ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಗುರುವಾರ ನವದೆಹಲಿಯಲ್ಲಿ ರಾಜ್ ಪಥ್ ನಲ್ಲಿ ನಡೆಯಲಿರುವ ಸೇನಾಪಥ ಸಂಚಲನದಲ್ಲಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಲಿದ್ದು, ಈ ನಿಟ್ಟಿನಲ್ಲಿಯೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉಗ್ರರ ದಾಳಿಯ ಮುನ್ನೆಚ್ಚರಿಕೆ ನೆಲೆಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸುಮಾರು 50 ಸಾವಿರ ಮಂದಿಯನ್ನು ಬಿಗಿ ಭದ್ರತೆ ನಿಯೋಜಿಸಲಾಗಿದೆ. ಪ್ರತಿ ಹಂತದಲ್ಲಿಯೂ ಬಿಗಿ ಕಣ್ಗಾವಲು ಇಡಲಾಗಿದೆ ಎಂದು ವರದಿ ವಿವರಿಸಿದೆ. ಲಷ್ಕರ್ ಇ ತೊಯ್ಬಾದಂತಹ ಉಗ್ರಗಾಮಿ ಸಂಘಟನೆಗಳು ಹೆಲಿಕಾಪ್ಟರ್ ಅಥವಾ ಲಘು ವಿಮಾನ ಬಳಸಿ ವೈಮಾನಿಕ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.
ದಾಳಿಯನ್ನು ಪತ್ತೆ ಹಚ್ಚಿವ ಸಲುವಾಗಿ ಪೊಲೀಸರು ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಯಾವುದೇ ಅನುಮಾನಸ್ಪದ ಹಾರಾಟದ ವಸ್ತುಗಳು ಕಂಡುಬಂದಲ್ಲಿ ಗುರುತಿಸುವ ಕೆಲಸ ಮಾಡಲು ಸಿದ್ದವಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.