ಮುಂಬೈ:ರೈಲು ನಿಲ್ದಾಣದ ಪ್ಲಾಟ್ಫಾರ್ಮಿಗೆ ಕಾರು ನುಗ್ಗಿಸಿದ ಕ್ರಿಕೆಟಿಗ
Team Udayavani, Feb 20, 2017, 3:19 PM IST
ಮುಂಬಯಿ: 19ರ ಕೆಳ ಹರೆಯದವರ ಕ್ರಿಕೆಟ್ ತಂಡದ ಆಟಗಾರನಾಗಿರುವ ಹರ್ಪ್ರೀತ್ ಸಿಂಗ್ ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಫ್ಲಾಟ್ಫಾರ್ಮಿಗೆ ಕಾರು ನುಗ್ಗಿಸಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ನಡೆಯಿತು.
ಹರ್ಪ್ರೀತ್ ಅವರು ಇಂದು ಸೋಮವಾರ ಬೆಳಗ್ಗೆ ಬಾಂದ್ರಾದಿಂದ ಕಾರಿನಲ್ಲಿ ಹೊರಟಿದ್ದರು. ಜನದಟ್ಟನೆಯಿಂದ ಕೂಡಿದ್ದ ಅಂಧೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್ಫಾರ್ಮಿಗೆ ಅವರು ವೇಗವಾಗಿ ಕಾರನ್ನು ಓಡಿಸಿದರು. ಇದನ್ನು ಕಂಡು ಜನರು ಕಂಗಾಲಾದರು. ಗೊಂದಲದ ನಡುವೆ ಸ್ಥಳದಲ್ಲಿ ಗಲಾಟೆಯೂ ನಡೆಯಿತು.
ಹರ್ಪ್ರೀತ್ ಸಿಂಗ್ ಅವರು ತಮ್ಮ ಕಾರನ್ನು ವಿಕಲಾಂಗರ ಗಾಲಿ ಕುರ್ಚಿ ಒಯ್ಯಲು ಕಲ್ಪಿಸಲಾಗಿದ್ದ ಇಳಿಜಾರು ಮಾರ್ಗದ ಮೇಲೆ ಒಯ್ದಿದ್ದರು. ದಿಕ್ಕು ತಿಳಿಯದೆ ತಾನು ಹೀಗೆ ಮಾಡಿದೆ ಎಂದು ಹೇಳಿಕೊಂಡ ಹರ್ಪ್ರೀತ್ ಕುಡಿದ ಮತ್ತಿನಲ್ಲಿ ಹೀಗೆ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು. ಅಂತೆಯೇ ಅವರು ಹರ್ಪ್ರೀತ್ ವಿರುದ್ಧ ಕೇಸು ದಾಖಲಿಸಿಕೊಂಡರು.
ಹರ್ಪ್ರೀತ್ ರನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ಆತ ಮದ್ಯ ಸೇವಿಸಿರುವುದು ಖಚಿತವಾಯಿತು.