ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠ:46ನೇ ಬೃಂದಾವನ ಪ್ರತಿಷ್ಠಾಪನೆ
Team Udayavani, Apr 27, 2017, 3:53 PM IST
ಮುಂಬಯಿ: ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ಜೋಗೇಶ್ವರಿ ಪಶ್ಚಿಮದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಎ. 28ರಂದು ಅಕ್ಷಯ ತೃತೀಯ ದಿನದಂದು ರಾಯರ ಬೃಂದಾವನವನ್ನು ಚಂದನ ಲೇಪನದಲ್ಲಿ ಅಲಂಕರಿಸುವ ಮೂಲಕ 46ನೇ ಬೃಂದಾವನ ಪ್ರತಿಷ್ಠಾಪನ ದಿನಾಚರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ವತಿಯಿಂದ ಜಂಟಿಯಾಗಿ ಜರಗಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕೃಷ್ಣ ಪ್ರತಿಷ್ಠಾನದ ಸಂಸ್ಥಾಪಕ, ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತೃತ್ವತಲ್ಲಿ ಸಂಜೆ 5ರಿಂದ ರಾತ್ರಿ 8ರವರೆಗೆ ಭಕ್ತ ಪ್ರಹ್ಲಾದ ಹಾಗೂ ಎ. 29ರಂದು ಶ್ರೀ ರಾಘವೇಂದ್ರ ಸ್ವಾಮಿ ಮಹಿಮೆ, ಎ. 30ರಂದು ಶ್ರೀನಿವಾಸ ಕಲ್ಯಾಣೋತ್ಸವ ಹರಿಕಥಾ ಕಾಲಕ್ಷೇಪವನ್ನು ಆಯೋಜಿಸಲಾಗಿದೆ.
ವೈಶಾಖ ಮಾಸದ 3ನೇ ದಿನ ಅಕ್ಷಯ ತೃತೀಯವಾಗಿದ್ದು, ಅಂದು ಸೂರ್ಯಚಂದ್ರರು ಸ್ವ ಪ್ರಕಾಶ ಮಾನವಾಗಿ ಹೊಳೆಯುವ ದಿನ ವಾಗಿದ್ದು, ಪುರಾಣದ ಆಧಾರದ ಪ್ರಕಾರ ಇದು 2ನೇ ಯುಗವಾದ ತ್ರೇತಾಯುಗ ಪ್ರಾರಂಭದ ದಿನವಾಗಿದೆ. ಶ್ರೀ ವಿಷ್ಣುವಿನ ಜನ್ಮವತಾರದ ದಿನವಾಗಿದ್ದು, ವಾಮನ, ಪರುಶುರಾಮ, ಶ್ರೀರಾಮನು ಅವತಾರವೆತ್ತಿದ ದಿನವೂ ಆಗಿದೆ. ಅಕ್ಷಯ ತೃತೀಯವು ಚಂದನ ಯಾತ್ರೆಯ ದಿನವಾಗಿದ್ದು, ದೇವರ ವಿಗ್ರಹಗಳಿಗೆ ಗಂಧಲೇಪನ ವಿಶೇಷ ವಾಗಿರುವುದರಿಂದ ಶ್ರೀ ಆಂಜ ನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾನವು ಚಂದನ ಲೇಪನದಿಂದ ಕಂಗೊಳಿಸುತ್ತದೆ.
ಮೂರು ದಿನಗಳಲ್ಲಿ ನೂತನ ಬೃಂದಾವನದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮ ದಲ್ಲಿ ಮಹಾನಗರದ ಭಕ್ತ ರೆಲ್ಲರೂ ಪಾಲ್ಗೊಂಡು ಶ್ರೀ ರಾಯರ ಕೃಪೆಗೆ ಪಾತ್ರರಾಗು ವಂತೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ, ಅರ್ಚಕ, ಸಿಬಂದಿ ವರ್ಗ ಹಾಗೂ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.