ದೇಶಕ್ಕಾಗಿ ಐಪಿಎಲ್ ಹಣ ತ್ಯಜಿಸಿದ ದ್ರಾವಿಡ್!
Team Udayavani, Jul 1, 2017, 3:45 AM IST
ನವದೆಹಲಿ: ಭಾರತ ತಂಡದ ಕೋಚ್ ಆಗಿ ದ್ರಾವಿಡ್ 2 ವರ್ಷದ ಅವಧಿ ವಿಸ್ತರಣೆ ಪಡೆಯುವುದರ ಹಿಂದೆ ಅವರ ತ್ಯಾಗವೂ ದೊಡ್ಡದಿದೆ. ಆಕರ್ಷಕ ವೇತನ ನೀಡುವ ಐಪಿಎಲ್ ಆಮಿಷದಿಂದ ಅವರು ಹೊರಬಂದಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದೊಂದಿಗಿನ 2 ವರ್ಷದ ಸಂಬಂಧವನ್ನು ಕಡಿದುಕೊಂಡು ಪೂರ್ಣವಾಗಿ ರಾಷ್ಟ್ರೀಯ ತಂಡಕ್ಕೆ ತಮ್ಮ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ. ಕೇವಲ 2 ತಿಂಗಳು ಐಪಿಎಲ್ನಲ್ಲಿ ಮೆಂಟರ್ ಹುದ್ದೆ ನಿಭಾಯಿಸಿದರೆ 4 ಕೋಟಿ ರೂ.ಗೂ ಅಧಿಕ ವೇತನವನ್ನು ಅವರು ಪಡೆಯಲಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿ ಅವರ ವೇತನ ಇದರ ಅರ್ಧದಷ್ಟು ಮಾತ್ರ ಇರಲಿದೆ.
ಈ ಹಿಂದೆ ದ್ರಾವಿಡ್ಗೆ 10 ತಿಂಗಳ ಕಾಲ ಮಾತ್ರ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯನ್ನು ನೀಡಲಾಗಿತ್ತು. ಇನ್ನು 2 ತಿಂಗಳು ಐಪಿಎಲ್ ಹುದ್ದೆಯನ್ನು ನಿಭಾಯಿಸಲು ಅವಕಾಶವಿತ್ತು. ಇತ್ತೀಚೆಗೆ ಬಿಸಿಸಿಐ ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದ ರಾಮಚಂದ್ರ ಗುಹಾ, ದ್ರಾವಿಡ್ ಅವರ ವಿರುದ್ಧ ಸ್ವಹಿತಾಸಕ್ತಿ ಆರೋಪ ಮಾಡಿದ್ದರು. ಭಾರತ ತಂಡ ಮತ್ತು ಐಪಿಎಲ್ ಎರಡರಲ್ಲೂ ಕೋಚ್ ಆಗುವುದು ಸ್ವಹಿತಾಸಕ್ತಿ ಎಂದು ಹೇಳಿದ್ದರು. ಇದರ ಪರಿಣಾಮ ದ್ರಾವಿಡ್ ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಡೆಲ್ಲಿ ಡೆವಿಲ್ಸ್ ಬೇಸರ: ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಹುದ್ದೆಯಿಂದ ಹೊರಬಂದಿರುವುದಕ್ಕೆ ಡೆಲ್ಲಿ ತಂಡದ ಸಿಇಒ ಹೇಮಂತ್ ದುವಾ ಬೇಸರ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ತಂಡದ ಆಟಗಾರರನ್ನು ಸಜ್ಜುಗೊಳಿಸಲು ಮಹತ್ವದ ಕಾಣಿಕೆ ನೀಡಿದ್ದರು. ಅವರೊಂದಿಗೆ ಮತ್ತೆ ಕೆಲಸ ಮಾಡುವುದಕ್ಕಾಗುವುದಿಲ್ಲ ಎನ್ನುವುದಕ್ಕೆ ನಾವು ಬೇಸರಗೊಂಡಿದ್ದೇವೆ. ಕ್ರಿಕೆಟಿನ ಒಬ್ಬ ನೈಜ ಸೇವಕನಾಗಿ ಅವರು ತಮ್ಮಿಂದ ಕ್ರಿಕೆಟ್ಗೆ ಇನ್ನೂ ಬಹಳಷ್ಟು ಕಾಣಿಕೆ ನೀಡಲು ಸಾಧ್ಯವಿದೆ ಎಂದು ನಂಬಿದ್ದಾರೆ. ಅವರಿಗೆ ಶುಭಾಶಯ ಎಂದು ದುವಾ ಹೇಳಿದ್ದಾರೆ.