ಉದ್ವಿಗ್ನ ಬಂಟ್ವಾಳ: ಕರ್ಫ್ಯೂ ಮಾದರಿ ಸ್ಥಿತಿ, ವ್ಯಾಪಕ ತಪಾಸಣೆ
Team Udayavani, Jul 9, 2017, 1:45 PM IST
ಬಂಟ್ವಾಳ: ಕಲ್ಲಡ್ಕ ಗಲಭೆ,ಎಸ್ಡಿಪಿಐ ಮುಖಂಡ ಅಶ್ರಫ್ ಕಳಾಯಿ, ಆರ್ಎಸ್ಎಸ್ ಕಾರ್ಯಕರ್ತ ಶರತ್ ಹತ್ಯೆಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಕರ್ಫ್ಯೂ ಮಾದರಿಯ ಸ್ಥಿತಿ ನಿರ್ಮಾಣವಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ಇ ನ್ನಷ್ಟು ಬಿಗಿಗೊಳಿಸಲಾಗಿದೆ. ಬಂಟ್ವಾಳ ಸಹಿತ ವಿವಿಧೆಡೆ 26 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ಮೇಲೆ ನಿಗಾ ಇರಿಸಲಾಗಿದೆ .
ಫೈರ್ ಮಾಡಿ
ಕಲ್ಲಡ್ಕ, ಬಿ.ಸಿ.ರೋಡ್ ಸೇರಿದಂತೆ 7ವಲಯಗಳನ್ನಾಗಿ ವಿಂಗಡಿಸಲಾಗಿದ್ದು, 26 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಅನುಮಾನ ಬಂದ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ವ್ಯಕ್ತಿಯ ಬಳಿ ಆಯುಧಗಳು ಕಂಡು ಬಂದರೆ ಅಲ್ಲೇ ವಶಕ್ಕೆ ಪಡೆಯಲಾಗುತ್ತದೆ. ಯಾರೇ ಆಗಲಿ ಪೊಲೀಸರ ಮೇಲೆ ದಾಳಿಗೆ ಮುಂದಾದಲ್ಲಿ ಗುಂಡು ಹಾರಿಸಲಾಗುತ್ತದೆ. ಚೆಕ್ಪೋಸ್ಟ್ಗಳ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಗುಂಡು ಹಾರಿಸಲು ಕಾನೂನಿನಂತೆ ಪೊಲೀಸರಿಗೆ ಅವಕಾಶ ಕೊಡಲಾಗಿದೆ ಎಂದು ಐಜಿಪಿ ಹರಿಶೇಖರನ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಅಹಿತಕರ ಘಟನೆಗಳಿಗೆ ಕಾರಣವಾದ 20 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿಯೂ ವ್ಯಾಪಕ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಒಟ್ಟು 3,000ಕ್ಕೂ ಮಿಕ್ಕಿ ಪೊಲೀಸರನ್ನು ನಿಯೋಜಿಸಲಾಗಿದೆ.
ನಿಷೇಧಾಜ್ಞೆ ಮುಂದುವರಿದಿದ್ದು ಹೊರ ಜಿಲ್ಲೆಗಳಿಂದ ಪೊಲೀಸರನ್ನು ಮತ್ತು ಕೆ.ಎಸ್.ಆರ್.ಪಿ. ಪಡೆಯನ್ನು ಕರೆಸಲಾಗಿದೆ. ಜಿಲ್ಲಾ ಪೊಲೀಸ್ನ 4 ತಾ|ಗಳಲ್ಲಿ ಜಿಲ್ಲೆಯ ಪೊಲೀಸರ ಹೊರತಾಗಿ ಹೆಚ್ಚುವರಿಯಾಗಿ 1,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.ಕಮಿಷನರೆಟ್ ವ್ಯಾಪ್ತಿಯಲ್ಲಿ ಸ್ಥಳೀಯ ಪೊಲೀಸರ ಹೊರತಾಗಿ 10 ಕೆಎಸ್ಆರ್ಪಿ ಪಡೆ ಸಹಿತ ಒಟ್ಟು 2,000 ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿದ್ದಾರೆ.