ಮೂಲ್ಕಿ:ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು
Team Udayavani, Jul 9, 2017, 4:52 PM IST
ಮೂಲ್ಕಿ : ಇಲ್ಲಿನ ಅಧಿಕಾರಿಬೆಟ್ಟು ಬಳಿ ಶಾಂಭವಿ ನದಿಗೆ ಈಜಲು ತೆರಳಿದ್ದ ಮೂವರು ನೀರುಪಾಲಾದ ದುರ್ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮಟ್ಟು ಹೆಜಮಾಡಿ ಕಡವು ಬಳಿಯ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಅಕ್ಷತ್,ಕಿಶೋರ್ ಮತ್ತು ಮಹೇಶ್ ಎನ್ನುವ ಯುವಕರು ನೀರುಪಾಲಾದ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಮಂಗಳೂರಿನಿಂದ 11 ಮಂದಿ ಸ್ನೇಹಿತರು ಮೃತ ಮಹೇಶ್ನೊಂದಿಗೆ ವಿಹಾರಕ್ಕೆಂದು ಬಂದಿದ್ದರು ಎನ್ನಲಾಗಿದೆ. ಮಹೇಶ್ಗೆ ಈಜು ಬರುತ್ತಿದ್ದು,ಉಳಿದಿಬ್ಬರಿಗೆ ಈಜು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮೃತರು 20 ವರ್ಷ ಅಂದಾಜು ಪ್ರಾಯದವರು ಎಂದು ವರದಿಯಾಗಿದೆ.
ಸ್ಥಳೀಯರು ಮತ್ತು ಪೊಲೀಸರು ಅಗ್ನಿ ಶಾಮಕದಳದ ಸಿಬಂದಿಗಳ ಹುಡುಕಾಟದ ವೇಳೆ ಮೂವರ ಶವಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.