ವನಿತಾ ವಿಶ್ವಕಪ್ ಪಂದ್ಯಾವಳಿ ಭಾರತದ ಮುಂದಿನ ಹಾದಿ ಸುಗಮವಲ್ಲ!
Team Udayavani, Jul 10, 2017, 3:55 AM IST
ಲಂಡನ್: ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ 4 ಗೆಲುವಿನ ಬಳಿಕ ಭಾರತ ತಂಡ ಮೊದಲ ಸೋಲನುಭವಿಸಿದೆ. ಶನಿವಾರ ದಕ್ಷಿಣ ಆಫ್ರಿಕಾ ಕೈಯಲ್ಲಿ 115 ರನ್ನುಗಳ ಆಘಾತಕ್ಕೊಳಗಾಗಿದೆ. ಸೆಮಿಫೈನಲ್ ಬಾಗಿಲಲ್ಲಿ ನಿಂತಿದ್ದ ಮಿಥಾಲಿ ಪಡೆಗೆ ಇದೊಂದು ಹಿನ್ನಡೆ. ಅಕಸ್ಮಾತ್ ಈ ಪಂದ್ಯವನ್ನು ಜಯಿಸಿದ್ದರೆ ಭಾರತ ನಾಕೌಟ್ ಹಂತಕ್ಕೇರಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು.
ಉಳಿದೆರಡು ಪಂದ್ಯಗಳನ್ನು ಒತ್ತಡವಿಲ್ಲದೇ ಆಡಬಹುದಿತ್ತು.ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ನಾಯಕಿ ಮಿಥಾಲಿ ರಾಜ್, ಸತತವಾಗಿ ಕಾಡುತ್ತಿರುವ ಓಪನಿಂಗ್ ಸಮಸ್ಯೆಯಿಂದ ತಂಡ ಕಂಗೆಟ್ಟಿದೆ ಎಂದಿದ್ದಾರೆ. “ಹೌದು, ವೆಸ್ಟ್ ಇಂಡೀಸ್ ಎದುರಿನ ಪಂದ್ಯದಿಂದೀಚೆ ನಾವು ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುವಲ್ಲಿ ವಿಫಲರಾಗುತ್ತಿದ್ದೇವೆ. ಒಂದಲ್ಲ, ಸತತ 4 ಪಂದ್ಯಗಳಲ್ಲಿ ಓಪನಿಂಗ್ ವೈಫಲ್ಯಕ್ಕೆ ಸಿಲುಕಿದ್ದೇವೆ. ರನ್ ಚೇಸ್ ಮಾಡುವುದಿರಲಿ ಅಥವಾ ಮೊದಲು ಬ್ಯಾಟಿಂಗ್ ನಡೆಸುವುದಿರಲಿ, ಆರಂಭಿಕ ವಿಕೆಟಿಗೆ ದೊಡ್ಡ ಮೊತ್ತವೊಂದು ದಾಖಲಾಗುವುದು ಅತ್ಯವಶ್ಯ. ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ನಮ್ಮ ಓಪನಿಂಗ್ ಕಂಡಾಗ ಭಾರೀ ಭರವಸೆ ಮೂಡಿತ್ತು. ಆದರೆ ಅಲ್ಲಿಂದೀಚೆ ನಿರಂತರ ವೈಫಲ್ಯ ಕಾಣುತ್ತ ಬಂದಿರುವುದೊಂದು ದುರಂತ…’ ಎಂದರು.
“ದಕ್ಷಿಣ ಆಫ್ರಿಕಾ ಎದುರಿನ ಪಂದ್ಯತವನ್ನೇ ನೋಡಿ. ಇಲ್ಲಿ 274 ರನ್ ಬೆನ್ನಟ್ಟಬೇಕಿತ್ತು. ಇಂಥ ದೊಡ್ಡ ಮೊತ್ತದ ಚೇಸಿಂಗ್ ವೇಳೆ ಒತ್ತಡ ಬೀಳುವುದು ಸಹಜ. ಆದರೆ ಆರಂಭಿಕರು ಕ್ರೀಸ್ ಆಕ್ರಮಿಸಿಕೊಂಡು ಉತ್ತಮ ಮೊತ್ತ ಪೇರಿಸಿದರೆ ಇದೇ ಲಯದಲ್ಲಿ ಮುಂದುವರಿಯಲು ಸಾಧ್ಯವಿತ್ತು. ದುರದೃಷ್ಟವಶಾತ್ ಇಲ್ಲಿ ಈ ಯೋಜನೆ ವಿಫಲವಾಯಿತು…’ ಎಂದು ಮಿಥಾಲಿ ವಿಷಾದಿಸಿದರು.
ನಾಯಕಿ ಮಿಥಾಲಿ ರಾಜ್ ಹೇಳಿಕೆಯಲ್ಲಿ ಹುರುಳಿಲ್ಲದಿಲ್ಲ. ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಸ್ಮತಿ ಮಂಧನಾ (90) ಮತ್ತು ಪೂನಂ ರಾವತ್ (86) ಸೇರಿಕೊಂಡು 144 ರನ್ ಪೇರಿಸಿದರು. ಇದರಿಂದ ತಂಡದ ಮೊತ್ತ 281ರ ತನಕ ಬೆಳೆಯಲು ಸಾಧ್ಯವಾಯಿತು.
ವೆಸ್ಟ್ ಇಂಡೀಸ್ ಎದುರು ಭಾರತ 7 ವಿಕೆಟ್ ಜಯ ಸಾಧಿಸಿದರೂ, ಮಂಧನಾ ಅಜೇಯ 106 ರನ್ ಬಾರಿಸಿದರೂ ಮೊದಲ ವಿಕೆಟಿಗೆ ರನ್ನೇ ಬರಲಿಲ್ಲ ಎಂಬುದನ್ನು ಗಮನಿಸಬೇಕು. ಪೂನಂ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದ್ದರು.
ಪಾಕಿಸ್ಥಾನದೆದುರಿನ ಪಂದ್ಯದಲ್ಲಿ ಮೊದಲ ವಿಕೆಟಿಗೆ ದಾಖಲಾದದ್ದು ಕೇವಲ 7 ರನ್. ಪೂನಂ 47 ರನ್ ಮಾಡಿದರೂ ಮಂಧನಾ ವೈಫಲ್ಯ ಇಲ್ಲಿಂದ ಮೊದಲ್ಗೊಳ್ಳುತ್ತದೆ (2). ಶ್ರೀಲಂಕಾ ಎದುರು ಆರಂಭಿಕ ವಿಕೆಟಿಗೆ ಬಂದ ರನ್ ಕೇವಲ 21. ಮಂಧನಾ 8, ಪೂನಂ 16 ರನ್ ಮಾಡಿ ನಿರ್ಗಮಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧವೂ ಮಂಧನಾ ಎಡವಿದರು (4). ಆಗ ತಂಡದ ಮೊತ್ತವೂ 4 ರನ್ ಆಗಿತ್ತು. ಪೂನಂ 22 ರನ್ನಿಗೆ ಔಟಾದರು. ಮಿಥಾಲಿ, ಹರ್ಮನ್ಪ್ರೀತ್, ಶಿಖಾ (ಮೂವರೂ ಸೊನ್ನೆ), ವೇದಾ (3) ವೈಫಲ್ಯ ಭಾರತವನ್ನು ಸಂಕಟಕ್ಕೆ ತಳ್ಳುವಂತೆ ಮಾಡಿತು. ದೀಪ್ತಿ ಶರ್ಮ (60) ಮತ್ತು ಜೂಲನ್ ಗೋಸ್ವಾಮಿ (ಔಟಾಗದೆ 43) ಹೋರಾಟ ಯಾವುದಕ್ಕೂ ಸಾಲಲಿಲ್ಲ.
ಮುಂದಿನ ಹಾದಿ ಸುಲಭದ್ದಲ್ಲ
ಅಗ್ರ ಸ್ಥಾನದಲ್ಲಿದ್ದ ಭಾರತವೀಗ ದ್ವಿತೀಯ ಸ್ಥಾನಕ್ಕೆ ಬಂದಿದೆ. ರವಿವಾರದ ಇಂಗ್ಲೆಂಡ್-ಆಸ್ಟ್ರೇಲಿಯ ಪಂದ್ಯದ ಬಳಿಕ ಮಿಥಾಲಿ ಪಡೆ ಇನ್ನೊಂದು ಸ್ಥಾನ ಕುಸಿದರೂ ಅಚ್ಚರಿಯಿಲ್ಲ. ಕಾರಣ, 8 ಅಂಕ ಹೊಂದಿದ್ದರೂ ಭಾರತ ರನ್ರೇಟ್ನಲ್ಲಿ ಬಹಳ ಹಿಂದಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಬೆನ್ನಟ್ಟಿಕೊಂಡು ಬರುತ್ತಿರುವುದರಿಂದ ಭಾರತ ಒಂದಿಷ್ಟು ಆತಂಕಕ್ಕೆ ಸಿಲುಕಿರುವುದು ಸುಳ್ಳಲ್ಲ.
ಅಂತಿಮ 3 ಲೀಗ್ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಸಾಕು, ಸೆಮಿಫೈನಲ್ ಖಚಿತ ಎಂಬ ಲೆಕ್ಕಾಚಾರ ಭಾರತದ್ದಾಗಿತ್ತು. ಈಗ 2 ಪಂದ್ಯಗಳಷ್ಟೇ ಉಳಿದಿವೆ. ಒಂದು ಗೆಲುವು ಅನಿವಾರ್ಯವಾಗಿದೆ. ಆದರೆ ಭಾರತದ ಎದುರಾಳಿಗಳಾಗಿರುವ ಆಸ್ಟ್ರೇಲಿಯ (ಜು. 12) ಮತ್ತು ನ್ಯೂಜಿಲ್ಯಾಂಡ್ (ಜು. 15) ಎರಡೂ ಬಲಾಡ್ಯ ತಂಡಗಳೆಂಬುದನ್ನು ಮರೆಯುವಂತಿಲ್ಲ. ಅಕಸ್ಮಾತ್ ಇವೆರಡರಲ್ಲೂ ಮಿಥಾಲಿ ಬಳಗಕ್ಕೆ ಸೋಲಿನ ಆಘಾತ ಎದುರಾದರೆ? ಆಗ ಸೆಮಿಫೈನಲ್ ಮರೀಚಿಕೆಯಾಗಲೂಬಹುದು! ಭಾರತ ಈ ದುರಂತವನ್ನು ತಂದುಕೊಳ್ಳದಿರಲಿ ಎಂಬುದು ಅಭಿಮಾನಿಗಳ ಹಾರೈಕೆ.