ಕೊಚ್ಚಿ ಹೋದ ರಸ್ತೆಯನ್ನು ಮರುನಿರ್ಮಿಸಿದ ಯುವಕರು
Team Udayavani, Jul 10, 2017, 1:10 AM IST
ಹಳೆಯಂಗಡಿ: ಮಳೆ ನೀರಿನಿಂದ ಕೊಚ್ಚಿ ಹೋಗಿದ್ದ ತೋಕೂರಿನ ಲೈಟ್ಹೌಸ್ ರಸ್ತೆಯನ್ನು ಸ್ಥಳೀಯ ಯುವಕರೇ ಸೇರಿ ಮರುನಿರ್ಮಾಣ ಮಾಡಿದ್ದಾರೆ.
ಇಲ್ಲಿನ ಪಕ್ಷಿಕೆರೆ ಮುಖ್ಯರಸ್ತೆಗೆ ಹತ್ತಿರದ ಲೈಟ್ಹೌಸ್ ಬಳಿಯ ಈ ಅಡ್ಡ ರಸ್ತೆಯು ಇಲ್ಲಿನ ಗ್ರಾಮಸ್ಥರ ನಿತ್ಯ ಸಂಚಾರ ರಸ್ತೆಯಾಗಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆ ನೀರು ಸರಾಗವಾಗಿ ಅದರ ಪಕ್ಕದಲ್ಲಿಯೇ ಇರುವ ತೋಡಿನಲ್ಲಿ ಹರಿಯುತ್ತಿತ್ತಲ್ಲದೆ, ಬಳಿಕ ಈ ರಸ್ತೆಯೂ ನೀರುಪಾಲಾಗಿತ್ತು.
ನೀರು ಹರಿಯಲು ಅನುವು
ಇಲ್ಲಿನ ಸಂಪರ್ಕಕ್ಕೆ ಈ ರಸ್ತೆ ಅನಿವಾರ್ಯವಾಗಿದ್ದರಿಂದ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕುಲಾಲ್ ನೇತೃತ್ವದಲ್ಲಿ ಸ್ಥಳೀಯ ಯುವಕರು ಸುಮಾರು ಮೂರು ತಾಸಿನ ಶ್ರಮದಾನದ ಮೂಲಕ ತೋಡಿಗೆ ಬೃಹತ್ ಸಿಮೆಂಟ್ನ ಪೈಪುಗಳನ್ನು ಅಳವಡಿಸಿ ಅದಕ್ಕೆ ಮಣ್ಣನ್ನು ಮೇಲ್ಮುಖವಾಗಿ ತುಂಬಿಸಿ ಕೊಚ್ಚಿ ಹೋದ ರಸ್ತೆಯನ್ನು ಮರು ನಿರ್ಮಾಣ ಮಾಡಿದರಲ್ಲದೆ, ತೋಡಿನಲ್ಲಿಯೂ ಸರಾಗವಾಗಿ ನೀರನ್ನು ಹರಿಯಲು ಅನುವು ಮಾಡಿಕೊಟ್ಟರು.
ಸ್ಥ§ಳೀಯ ಯುವಕರಾದ ಹರಿಶ್ಚಂದ್ರ, ದುರ್ಗಾದಾಸ್, ಪದ್ಮನಾಭ, ನಾರಾಯಣ, ಬಾಲಕೃಷ್ಣ, ರಮೇಶ್, ಪುರುಷೋತ್ತಮ ಮತ್ತಿತರರು ಸಹಕರಿಸಿದ್ದರು.