ಅಪಾಯಕಾರಿ ಮಾರ್ಗದಲ್ಲಿರುವುದು ಒಂದೇ ಸ್ಕೈವಾಕ್
Team Udayavani, Jul 19, 2017, 11:21 AM IST
ಕೆ.ಆರ್.ಪುರ: ಕೃಷ್ಣರಾಜಪುರದ ಮೂಲಕ ಹಾದು ಹೋಗಿರುವ ಹಳೆ ಮದ್ರಾಸ್ ರಾಷ್ಟ್ರೀಯ ಹೆದ್ದಾರಿ 75ರ ಬೆನ್ನಿಗಾನಹಳ್ಳಿಯಿಂದ-ಮೇಡಹಳ್ಳಿ ಜಂಕ್ಷನ್ವರೆಗಿನ 7 ಕಿ.ಮೀ ರಸ್ತೆಯು ಬೆಂಗಳೂರಿನಲ್ಲೇ ಅತ್ಯಂತ ಅಪಾಯಕಾರಿ ಎಂಬ ಅಂಶ ಸಂಚಾರ ಪೊಲೀಸರು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದ್ದು, ಪಾದಚಾರಿಗಳಿಗೆ ಸ್ಕೈವಾಕ್ ಇಲ್ಲದೇ ಇರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಂಚಾರ ವಿಭಾಗದ ವರದಿಯು ಸ್ಥಳೀಯ ನಾಗರಿಕರನ್ನು ಬೆಚ್ಚಿಬೀಳಿಸಿದ್ದು, ಸ್ಕೈವಾಕ್ಗಳ ನಿರ್ಮಾಣಕ್ಕೆ ಕೂಗು ಎದ್ದಿದೆ. ಜನರಿಗೆ ಬೇಕಾದ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಿಸದೇ ಜಾಹೀರಾತು ಸಂಸ್ಥೆಗಳಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಸ್ಕೈವಾಕ್ಗಳನ್ನು ನಿರ್ಮಿಸುತ್ತಿರುವ ಬಿಬಿಎಂಪಿಯ ನಡೆಯನ್ನು ಮತ್ತೂಮ್ಮೆ ಪ್ರಶ್ನಿಸುವಂತ ಸನ್ನಿವೇಶ ನಿರ್ಮಾಣವಾಗಿದೆ.
ಹಳೇ ಮದ್ರಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯು ಆಂಧ್ರಪ್ರದೇಶ, ತಮಿಳುನಾಡು, ಕೋಲಾರ, ಚಿಂತಾಮಣಿ, ಮುಳುಬಾಗಿಲು, ಚಿಕ್ಕಬಳ್ಳಾಪುರ, ಹೊಸಕೋಟೆ, ಮಾಲೂರಿಗೆ ಸಂಪರ್ಕಿಸುವ ಮಾರ್ಗ. ಹೀಗಾಗಿ ಇಲ್ಲಿ ನಿತ್ಯ ವಿಪರೀತ ಸಂಚಾರ ದಟ್ಟಣೆ ಸಾಮಾನ್ಯ.
ಈ ಮಾರ್ಗದ ಬೆನ್ನಿಗಾನಹಳ್ಳಿಯಿಂದ ಮೇಡಹಳ್ಳಿಯವರೆಗಿನ 7ಕಿ.ಮೀನಲ್ಲಿ ಮೂರು ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 208 ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದೆ ಸಂಚಾರ ವಿಭಾಗದ ವರದಿ. ಹೀಗಾಗಿ ಈ ರಸ್ತೆ ಸದ್ಯ ಮೃತ್ಯು ಕೂಪ ಎಂಬ ಹಣೆಪಟ್ಟಿ ಹೊತ್ತಿದೆ.
ಈ ಮಾರ್ಗದಲ್ಲಿ ಅಗತ್ಯವಿರುವ ಕಡೆ ಸ್ಕೈವಾಕ್ಗಳನ್ನು ನಿರ್ಮಾಣ ಮಾಡಿದರೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎನ್ನುವುದು ನಾಗರಿಕರ ಅಭಿಪ್ರಾಯ. ಇರೋದು ಒಂದೇ ಸ್ಕೈವಾಕ್: ರಾಷ್ಟ್ರೀಯ ಹೆದ್ದಾರಿಯ ಈ ಅಪಾಯಕಾರಿ ಮಾರ್ಗದಲ್ಲಿ ಕೆಅರ್ ಪುರ ವಿನಾಯಕ ದೇವಸ್ಥಾನದ ಬಳಿ ಸದ್ಯ ಒಂದು ಸ್ಕೈವಾಕ್ ಇದೆ.
ಅದು ಬಿಟ್ಟರೆ ಮೇಡಹಳ್ಳಿಯ ವರೆಗೆ ಒಂದೇ ಒಂದೂ ಸ್ಕೈವಾಕ್ಗಳಿಲ್ಲ. ಐಟಿಐ ಬಸ್ ನಿಲ್ದಾಣ, ಕೆಆರ್ ಪುರ ಬಿಬಿಎಂಪಿ ಕಚೇರಿ ಮುಂಬಾಗ, ಬಟ್ಟರಹಳ್ಳಿ ಜಂಕ್ಷನ್, ಕೆಆರ್ ಪುರ ಎಕ್ಸಟೇನನ್ನಲ್ಲಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಸ್ಕೈವಾಕ್ಗಳಿಲ್ಲದ ಪರಿಣಾಮ ನಾಗಕರು ವಾಹನಗಳ ಮಧ್ಯೆಯೇ ರಸ್ತೆ ದಾಟುವುದು ಅನಿವಾರ್ಯವಾಗಿದೆ.
ಎಲ್ಲೆಲ್ಲಿ ಬೇಕು ಸ್ಕೈವಾಕ್
-ಐಟಿಐ ಬಸ್ ನಿಲ್ದಾಣ
-ಕೆಆರ್ ಪುರ ಬಿಬಿಎಂಪಿ ಕಚೇರಿ ಮುಂಬಾಗ
-ಬಟ್ಟರಹಳ್ಳಿ ಜಂಕ್ಷನ್
-ಕೆಆರ್ ಪುರ ಎಕ್ಸಟೇನನ್
ಕೆಆರ್ ಪುರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಒಂದು ಬದಿಯಿಂದ ಮತ್ತೂಂದು ಬದಿಗೆ ಸಾರ್ವಜನಿಕರು ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟವರು ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಅವಶ್ಯವಿರುವ ಕಡೆ ಅದಷ್ಟೂ ಬೇಗ ಸ್ಕೈವಾಕ್ ನಿರ್ಮಾಣ ಮಾಡಬೇಕು.
-ಶ್ರೀನಿವಾಸ್, ಅಖೀಲಿ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ
* ಕೆ.ಆರ್.ಗಿರೀಶ್