ಬೆಂಗಳೂರಿನ ನಾಗ್ಪುರ ಚರಣಕ್ಕೆ ಜಯದ ಆರಂಭ
Team Udayavani, Aug 5, 2017, 6:55 AM IST
ನಾಗ್ಪುರ: ಪ್ರೊಕಬಡ್ಡಿ ನಾಗ್ಪುರಕ್ಕೆ ಚರಣಕ್ಕೆ ಗೆಲುವಿನ ಕಿಕ್ ನೀಡುವ ಮೂಲಕ ಬೆಂಗಳೂರು ಬುಲ್ಸ್ ಚಾಲನೆ ನೀಡಿದೆ.
ಇಲ್ಲಿನ ಮಂಕಾಪುರ ಒಳಾಂಗಣ ಕ್ರಿಡಾಂಗಣದಲ್ಲಿ ಶುಕ್ರವಾರ “ಬಿ” ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಭಾರತದ ಪ್ರಬಲ 2 ತಂಡಗಳ ಮಧ್ಯೆ ರೋಚಕ ಹಣಾಹಣಿ ನಡೆಯಿತು. ಜಿದ್ದಾಜಿದ್ದಿನ ಕದನದಲ್ಲಿ ಬುಲ್ಸ್ 32-31ರಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು. ಇದರೊಂದಿಗೆ ಬೆಂಗಳೂರು 5ನೇ ಆವೃತ್ತಿಯ ಕೂಟದಲ್ಲಿ ಸತತ 2ನೇ ಗೆಲುವು ದಾಖಲಿಸಿತು.
ಬುಲ್ಸ್ ಘರ್ಜನೆ: ಬೆಂಗಳೂರು ತಂಡ ಆರಂಭದಲ್ಲಿಯೇ ಮುನ್ನಡೆ ಪಡೆದುಕೊಂಡಿತು. 6ನೇ ನಿಮಿಷಕ್ಕೆ ತಮಿಳ್ ತಲೈವಾಸ್ ತಂಡ ಆಲೌಟ್ ಆಗಿದ್ದರಿಂದ ಬೆಂಗಳೂರು ತಂಡ ಬೋನಸ್ ಅಂಕದೊಂದಿಗೆ 9-3 ಮುನ್ನಡೆ ಪಡೆದುಕೊಂಡಿತು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ತಮಿಳ್ ತಲೈವಾಸ್ ತಂಡ ಪ್ರಯತ್ನ ವ್ಯರ್ಥವೆನಿಸಿತು.14ನೇ ನಿಮಿಷಕ್ಕೆ ತಮಿಳು ತಂಡ ಮತ್ತೂಮ್ಮೆ ಆಲೌಟ್ ಆದಾಗ ಬೆಂಗಳೂರು 21-6ರಿಂದ ಮುನ್ನಡೆ ಪಡೆದುಕೊಂಡಿತು. ಇದರಿಂದ ತಲೈವಾಸ್ ಮೇಲೆ ಒತ್ತಡ ಹೆಚ್ಚಾಯಿತು. ಪಂದ್ಯದ ಮೊದಲಾರ್ಧ ಪೂರ್ಣಗೊಂಡಾಗ ಬೆಂಗಳೂರು ತಂಡ 23-8ರಿಂದ ಮುನ್ನಡೆ ಹಿಗ್ಗಿಸಿಕೊಂಡಿತು.
ತಿರುಗಿಬಿದ್ದ ತಲೈವಾಸ್: ಹೀನಾಯ ಸೋಲಿನ ಸ್ಥಿತಿಯಲ್ಲಿದ್ದ ತಮಿಳ್ ತಂಡ ಸಂಘಟಾತ್ಮಕ ಪ್ರದರ್ಶನದ ಮೂಲಕ ಬೆಂಗಳೂರು ತಂಡಕ್ಕೆ ತಿರುಗೇಟು ನೀಡಿತು. ಆರಂಭದಲ್ಲಿ ರೋಹಿತ್ ಕುಮಾರ್ ಅವರಿಗೆ ಕಡಿವಾಣ ಹಾಕುವಲ್ಲಿ ತಲೈವಾಸ್ ಯಶಸ್ವಿಗೊಂಡಿತು. ದ್ವಿತಿಯಾರ್ಧದಲ್ಲಿ ತಲೈವಾಸ್ ಆಕ್ರಮಣಕಾರಿಯಾಗಿ ಆಡಲು ಮುಂದಾಯಿತು. ಅಮಿತ್ ಹೂಡಾ, ಡಾಂಗಿಯನ್ ಲೀ ತಂಡದ ಅಂಕ ಹೆಚ್ಚಿಸಿದರು. ತಲೈವಾಸ್ ತಂಡದ ಪ್ರಪಂಜನ್, ಡಾಂಗಿಯನ್ ಲೀ ರೈಡಿಂಗ್ ಸಹಾಯದಿಂದ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಕೊನೆಗೆ ಕೇವಲ 1 ಅಂಕದಿಂದ ರೋಚಕ ಸೋಲು ಅನುಭವಿಸಿತು.
– ವಿಶ್ವನಾಥ ಕೋಟಿ